ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ಮುಳ್ಳೇರಿಯ ಸಮೀಪದ ನೆಟ್ಟಣಿಗೆಯಲ್ಲಿ ವೃದ್ಧ ರೋರ್ವರು ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ.
ನೆಟ್ಟಣಿಗೆ ಸಬ್ರಕಜೆ ದೇವರಗುತ್ತುವಿನ ಗಂಗಾಧರ ರೈ (೭೮) ಮೃತಪಟ್ಟವರು.
ಶುಕ್ರವಾರ ರಾತ್ರಿ ೧೦ ಗಂಟೆ ಸುಮಾರಿಗೆ ಊಟ ಮಾಡಿ ಕುರ್ಚಿಯಲ್ಲಿ ಕುಳಿತ್ತಿದ್ದಾಗ ಸಿಡಿಲು ಬಡಿದಿದ್ದು ನೆಲಕ್ಕೆ ಬಿದ್ದ ಇವರನ್ನು ಪರಿಸರವಾಸಿಗಳ ಸಹಾಯದಿಂದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಸಿಡಿಲಿನಾಘಾತದಿಂದ ಮನೆಯ ವಿದ್ಯುತ್ ಉಪಕರಣಗಳು ಉರಿದಿವೆ. ಮನೆಯ ಗೋಡೆ ಬಿರುಕು ಬಿಟ್ಟಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಕೃಷಿ ಹಾನಿ ಉಂಟಾಗಿದೆ. ಹಲವು ರಸ್ತೆಗಳಲ್ಲಿ ಹೊಂಡಗಳು ಕಂಡು ಬಂದಿವೆ.ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಕುಂಬಳೆ, ಉಪ್ಪಳ ಮೊದಲಾದೆಡೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದರಿಂದ ಸಂಚಾರಕ್ಕೂ ಅಡ್ಡಿಯಾಗಿದೆ. ನೀರ್ಚಾಲು ದೇವರಮೆಟ್ಟು ಪರಿಸರದಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಕಪ್ಪಳಿಸಿವೆ.