ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ನಮ್ಮ ಆರೋಗ್ಯ ಕಡೆ ಗಮನ ಹರಿಸುವುದು ತುಂಬಾ ಉತ್ತಮ. ಏಕೆಂದರೆ ಮಳೆಯಿಂದಲೂ ನಮಗೆ ಹಲವು ರೋಗ-ರುಜಿನುಗಳು ಬರುವ ಸಾಧ್ಯತೆ ಅತಿ ಹೆಚ್ಚಿದೆ.
ಮಳೆಗಾಲದಲ್ಲಿ ಮಳೆ ನೀರು ನಿಂತು ಅಲ್ಲಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳು ನಮಗೆ ಕಚ್ಚುವುದರಿಂದ ಡೆಂಗ್ಯೂ, ಮಲೇರಿಯಾದಂತಹ ಜ್ವರಗಳು ನಮ್ಮನ್ನು ಕಾಡುತ್ತದೆ. ಮನೆಯ ಸುತ್ತಮುತ್ತ ಮಳೆನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯೊಳಗೆ ಸೊಳ್ಳೆ ಪರದೆಗಳನ್ನು ಬಳಸುವುದು ಒಳ್ಳೆಯದು.
ಎಲ್ಲೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ರಸ್ತೆ ಬದಿ, ಹೋಟೆಲ್ ಅಥವಾ ಹೊರಗಿನ ಆಹಾರವನ್ನು ತಿನ್ನುವುದು ನಿಲ್ಲಿಸಿಬಿಡಿ. ಮಳೆಗಾಲದಲ್ಲಿ ಹೊರಗಿನ ಆಹಾರ-ತಿಂಡಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಲ್ಲದೇ ಪ್ರಕೃತಿಗೆ ಹೊಸದಾಗಿ ನೀರು ಸೇರಿಕೊಳ್ಳುವುದರಿಂದ ಕೆಮ್ಮು, ನೆಗಡಿ, ಶೀತದಂತ ಕಾಯಿಲೆಗಳು ಬೇಗ ಬರುತ್ತದೆ.
ಮಳೆಗಾಲದಲ್ಲಿ ಮನೆಗೆ ತರುವಂತ ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆಯಬೇಕು. ಹೊರಗೆ ತಂಪಾದ ವಾತಾವರಣ ಇರುವುದರಿಂದ ಬ್ಯಾಕ್ಟೀರಿಯಾಗಳು ಬೇಗ ನಾಶವಾಗುವುದಿಲ್ಲ. ಹೀಗಾಗಿ ಹಣ್ಣು, ತರಕಾರಿಗಳನ್ನ ತೊಳೆದು ತಿನ್ನುವುದು ಬಹಳ ಉತ್ತಮ.
ಯಾವುದೇ ನಗರ ಬಹುತೇಕ ಮಾಲಿನ್ಯಕಾರಕ ಕಣಗಳಿಂದ ತುಂಬಿವೆ. ಹೀಗಾಗಿ ಮಳೆಯಲ್ಲಿ ನೆನೆದು ಬಂದಾಗ ಮನೆಯಲ್ಲಿನ ನೀರಿನಿಂದ ಸ್ನಾನ ಮಾಡಿ. ನೆನೆದು ಬಂದ ಬಟ್ಟೆಯಲ್ಲೇ ಇರಬೇಡಿ. ಒದ್ದೆ ಬಟ್ಟೆಯಲ್ಲೇ ಇದ್ದರೇ ಸೋಂಕು ತಗುಲಬಹುದು.
ವಿಟಮಿನ್ ಸಿ ಅಂಶವಿರುವ ಆಹಾರಗಳನ್ನ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ನಿಂಬೆಹಣ್ಣಿನ ಶರಬತ್ತು, ಬಾಳೆಹಣ್ಣು, ಬಿಟ್ರೂಟ್ನಂತ ಹಣ್ಣು, ತರಕಾರಿ ಸೇವಿಸಿ. ಹೆಚ್ಚು ಕೊಬ್ಬಿನಾಂಶವಿರುವ ಜಂಕ್ ಫುಡ್ಗಳನ್ನ ತೆಗೆದುಕೊಳ್ಳಬಾರದು. ಶೀತ, ನೆಗಡಿ, ಕೆಮ್ಮು ಅಂತ ವೈರಲ್ ಫೀವರ್ ಕಾಣಿಸಿಕೊಂಡರೇ ತಕ್ಷಣ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು.