ಭಾರತೀಯ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ಎಂದೇ ಜನಪ್ರಿಯರಾಗಿದ್ದ, ಕನ್ನಡ ಚಿತ್ರರಂಗದಲ್ಲಿ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ನಟ ದಿ.ಟಿ. ಆರ್ ನರಸಿಂಹರಾಜು.
‘ನಗುವುದು ಒಂದು ಭೋಗ. ನಗಿಸುವುದು ಒಂದು ಯೋಗ. ನಗದೇ ಇರುವುದು ಒಂದು ರೋಗ’ ಎನ್ನುವುದು ಹಾಸ್ಯಗಾರನ ಬದುಕಿನ ಸಾರ್ಥಕತೆಗೆ ಸಂಬಂಧಿಸಿದ ಒಂದು ಉಕ್ತಿ. ಕನ್ನಡದ ಪ್ರಸಿದ್ಧ ಹಾಸ್ಯ ನಟ ನರಸಿಂಹರಾಜು ಅವರ ಜೀವನ ಈ ಉಕ್ತಿಗೆ ಅನ್ವರ್ಥವಾಗಿತ್ತು. ತಮ್ಮ 25 ವರ್ಷಗಳ ಬಣ್ಣದ ಬದುಕಿನಿಂದ ಕನ್ನಡ ಸಿನಿಮಾ ರಂಗದ ಅವಿಭಾಜ್ಯ ಅಂಗವಾಗಿ, ಚಿತ್ರರಂಗದ ಬೆಳವಣಿಗೆಯ ಭಾಗವಾಗಿ, ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದವರು ನರಸಿಂಹರಾಜು. ಒಬ್ಬ ಕಾನ್ಸ್ಟೆಬಲ್ ಮಗ, ಉಬ್ಬು ಹಲ್ಲಿನ, ಸಣಕಲು ದೇಹದ ನಟ ಕನ್ನಡ ಚಿತ್ರರಂಗದಲ್ಲಿ ದೊಡ್ಡ ತಾರೆಯಾಗಿ ಬೆಳೆದದ್ದು ಒಂದು ಪವಾಡದಂತಿದೆ.
ವರನಟ ರಾಜ್ಕುಮಾರ್ ಮತ್ತು ನರಸಿಂಹ ರಾಜು ಇಬ್ಬರೂ ಸಹಾ ಬೇಡರ ಕಣ್ಣಪ್ಪ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ಬೇಡರ ಕಣ್ಣಪ್ಪ ನಾಟಕದ ಸಾವಿರಾರು ಪ್ರದರ್ಶನಗಳಲ್ಲಿ ನಟಿಸಿದ್ದ ನರಸಿಂಹ ರಾಜು ಅವರಿಗೆ ಅರ್ಚಕರ ಮಗ ಕಾಶಿಯ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿ ತಮ್ಮ ಚೊಚ್ಚಲು ಚಿತ್ರದಲ್ಲೇ ಕನ್ನಡ ಚಿತ್ರ ರಸಿಕರ ಮನಗೆಲ್ಲುವುದರಲ್ಲಿ ಸಫಲರಾಗುತ್ತಾರೆ. ಮುಂದೆ ಈ ಇಬ್ಬರೂ ನಟರು ಕನ್ನಡ ಚಿತ್ರರಂಗದಲ್ಲಿ ದಿಗ್ಗಜರಾಗಿ ಮೆರೆದರೂ, ರಂಗಭೂಮಿಯನ್ನು ಕಡೆಗಣಿಸದೇ ಸಮಯಸಿಕ್ಕಾಗಲೆಲ್ಲಾ ರಂಗಭೂಮಿಯಲ್ಲಿ ನಮ್ಮ ನಟನಾ ಕೌಶಲ್ಯವನ್ನು ಕನ್ನಡಿಗರಿಗೆ ಉಣ ಬಡಿಸುತ್ತಿದ್ದರು.
ಶ್ರೇಷ್ಠ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ನರಸಿಂಹರಾಜುರವರು ತಮ್ಮ ಪೀಚು ಶರೀರ, ಉಬ್ಬು ಹಲ್ಲು ತಮಗೆ ಅವಮಾನ ಎಂಬ ಕೀಳರಿಮೆಯನ್ನು ಬೆಳಸಿಕೊಳ್ಳದೇ ಅದನ್ನು ಬಳಸಿಕೊಂಡೇ ತಮ್ಮ ವಿಶಿಷ್ಟ ಬಗೆಯ ಹಾವಭಾವಗಳ ಮ್ಯಾನರಿಸಂಗಳ ಮೂಲಕ ಹಾಸ್ಯ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.
ಶ್ರೀಕೃಷ್ಣದೇವರಾಯ’ ಚಿತ್ರದಲ್ಲಿ ತೆನಾಲಿ ರಾಮಕೃಷ್ಣನಾಗಿ, ‘ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ನಕ್ಷತ್ರಿಕನಾಗಿ ನರಸಿಂಹರಾಜು ನಟಿಸಿದ್ದರು. ‘ಸಂಧ್ಯಾರಾಗ’, ‘ವೀರ ಕೇಸರಿ’, ‘ರತ್ನ ಮಂಜರಿ’, ‘ಕಣ್ತೆರೆದು ನೋಡು’, ‘ರಾಯರ ಸೊಸೆ’.. ಹೀಗೆ ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನರಸಿಂಹರಾಜು ಅಭಿನಯಿಸಿದ್ದಾರೆ. ಅವರ ಪಾತ್ರಗಳು ಕನ್ನಡ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿವೆ.
ಇವರು ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ. ಜುಲೈ 24ರ ಇಂದು ನರಸಿಂಹರಾಜು ಅವರ 100ನೇ ಹುಟ್ಟು ಹಬ್ಬ. ಈ ಸಂಭ್ರಮವನ್ನು ನರಸಿಂಹರಾಜು ಜನ್ಮ ಶತಮಾನೋತ್ಸವ ಎಂಬ ಹೆಸರಿನಡಿ ವರ್ಷವಿಡೀ ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಲು ನರಸಿಂಹರಾಜು ಕುಟುಂಬಸ್ಥರು ಹಾಗು ಅಭಿಮಾನಿಗಳು ನಿರ್ಧರಿಸಿದ್ದಾರೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು 100ನೇ ಹುಟ್ಟುಹಬ್ಬ ಸಲುವಾಗಿ ಈ ವರ್ಷ ಹಲವು ಕಾರ್ಯಕ್ರಮಗಳು ನಡೆಯಲಿವೆ.