ಬಹುಭಾಷಾ ನಟ ಸಾಯಿಕುಮಾರ್ ಶನಿವಾರ ಪುನೀತ್ ರಾಜುಕುಮಾರ ಅವರ ಸಮಾಧಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಮಾತನಾಡಿದ ಅವರು, ಡಾ ರಾಜ್ ಕುಟುಂಬದ ಜೊತೆ ತಮಗೆ ಬಹಳ ವರ್ಷಗಳಿಂದ ನಂಟಿದೆ . ಶಿವಣ್ಣ ಮತ್ತು ರಾಘಣ್ಣ ಆವರೊಂದಿಗೂ ಆತ್ಮೀಯ ಒಡನಾಟವಿದೆ, ರಾಘಣ್ಣ ಅವರ ಮಗನೊಂದಿಗೆ ಸಿನಿಮಾನಲ್ಲಿ ನಟಿಸಿರುವ ಸಂಗತಿಯನ್ನು ಅವರು ಹೇಳಿದರು.
ಪುನೀತ್ ಬಗ್ಗೆ ಭಾವುಕರಾಗಿ ಮಾತಾಡಿದ ಸಾಯಿಕುಮಾರ್ ಬಹಳ , ಅವರ ನಟನೆ ಮತ್ತು ವ್ಯಕ್ತಿತ್ವವನ್ನು ಕೊಂಡಾಡಿದರು. ಇದೇ ವೇಳೆ ‘ರಂಗಿತರಂಗ’ ಚಿತ್ರದಲ್ಲಿನ ನಟನೆಗೆ ದೊರೆತ ಎಸ್ಐಐಎಮ್ಎ ಪ್ರಶಸ್ತಿಯನ್ನು ಅವರಿಂದಲೇ ಸ್ವೀಕರಿಸಿದ್ದನ್ನು ಮೆಲಕು ಹಾಕಿದ ಆವರು, ಪ್ರಶಸ್ತಿ ಸ್ವೀಕರಿಸಿದ ನಂತರ ‘ಬಬ್ರುವಾಹನ’ ಚಿತ್ರದ ಡೈಲಾಗನ್ನು ತೆಲುಗಿನಲ್ಲಿ ಹೇಳಿದಾಗ ಅಪ್ಪು ಅದನ್ನು ಬಹಳ ಇಷ್ಟಪಟ್ಟರಂತೆ.
ತಮ್ಮ ಮಗಳ ಪ್ರಾಡಕ್ಟ್ ಒಂದನ್ನು ಅಪ್ಪು ಅವರಿಂದ ಲಾಂಚ್ ಮಾಡಿಸಿದ್ದನ್ನು ಸಹ ಸಾಯಿಕುಮಾರ ಜ್ಞಾಪಿಸಿಕೊಂಡರು. ಖುದ್ದು ಪುನೀತ್ ಅವರೇ ತಮ್ಮ ಶೂಟಿಂಗ್ ದಿನಾಂಕಗಳನ್ನು ಪರಿಶೀಲಿಸಿ ಬಿಡುವು ಮಾಡಿಕೊಂಡು ಪ್ರಾಡಕ್ಟ್ ಲಾಂಚ್ ಮಾಡಿದರಂತೆ. ಅದು ಮಕ್ಕಳ ಪ್ರಾಡಕ್ಟ್ ಆಗಿದ್ದರಿಂದ ಅಪ್ಪು ಅವರಿಂದಲೇ ಮಾಡಿಸಬೇಕೆಂಬ ಮಹದಾಸೆ ಸಾಯಿ ಅವರ ಮಗಳಿಗೆ ಇತ್ತಂತೆ.
ಅದೇ ಸಮಯದಲ್ಲಿ ಸಾಯಿ ಅವರು ತಮ್ಮ ಮಗನನ್ನು ಕನ್ನಡ ಚಿತ್ರರಂಗದಲ್ಲಿ ಲಾಂಚ್ ಮಾಡಬೇಕೆನ್ನುವ ಇಚ್ಛೆ ಪ್ರಕಟಿಸಿದಾಗ ಅಪ್ಪು ಅವರು ಕೂಡಲೇ ತಮ್ಮ ಪ್ರೊಡಕ್ಷನ್ ಹೌಸ್ನಿಂದಲೇ ಅವರನ್ನು ಲಾಂಚ್ ಮಾಡುವುದಾಗಿ ಹೇಳಿದರಂತೆ. ಆಗ ಅವರೊಂದಿಗೆ ಅಶ್ವಿನಿಯೂ ಇದ್ದರು ಮತ್ತು ಅವರು ಸಹ ತಮ್ಮ ಪತಿಯ ಮಾತಿಗೆ ಧ್ವನಿಗೂಡಿಸಿದರು ಎಂದು ಸಾಯಿಕುಮಾರ್ ಹೇಳಿದರು.