ನಂಜನಗೂಡು: ಬರೋಬ್ಬರಿ ಮೂರು ತಲೆಮಾರುಗಳಿಂದ ಇಂದಿರಾ ಗಾಂಧಿ ಅಧಿಕಾರ ಅವಧಿಯಲ್ಲಿ ನೀಡಿದ ಉಳುವ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಬಡ ಕುಟುಂಬದ ರೈತನ ಫಸಲು ಮಾಡಿರುವ ಉಳುವ ಭೂಮಿಗೆ ಅನುಮತಿ ಇಲ್ಲದೆ ಧಾವಿಸಿದ ಭೂ ಮಾಫಿಯಾ ಗಳ ವಿರುದ್ಧ ರೈತ ಮಹಿಳೆಯೊಬ್ಬರು ರೊಚ್ಚಿಗೆದ್ದ ಪರಿಣಾಮ ಸ್ಥಳದಿಂದ ನಾಪತ್ತೆಯಾದ ಘಟನೆ ನಂಜನಗೂಡು ತಾಲ್ಲೂಕಿನ ಬ್ಯಾಳಾರು ಗ್ರಾಮದಲ್ಲಿ ನಡೆದಿದೆ.
1974-75 ರಲ್ಲಿ ಇಂದಿರಾ ಗಾಂಧಿ ಅಧಿಕಾರ ಅವಧಿಯಲ್ಲಿ ದೇಬೂರು ಗ್ರಾಮದ ರಂಗಯ್ಯ ಎಂಬುವರಿಗೆ ಬ್ಯಾಳಾರು ಗ್ರಾಮದ ಸರ್ವೆ ನಂಬರ್ 113/2 ರಲ್ಲಿ ಒಂದು ಎಕರೆಯ ಜಮೀನು ಮಂಜುರಾಗಿದ್ದು, ಆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಮೂರ್ನಾಲ್ಕು ತಲೆಮಾರುಗಳಿಂದಲೂ ಜೀವನ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಏಕಾಏಕಿ ಇದು ನನಗೆ ಸೇರಿರುವ ಜಮೀನಾಗಿರುತ್ತದೆ ಎಂದು ತಕಾರರು ಮಾಡುತ್ತಿದ್ದರು. ಈ ವಿಚಾರವಾಗಿ ಕೃಷಿ ಭೂಮಿಯ ಮೂಲ ದಾಖಲಾತಿ ಪತ್ರಗಳ ಸಮೇತ ಮೈಸೂರಿನ ಉಪ ವಿಭಾಗ ಅಧಿಕಾರಿಗಳ ನ್ಯಾಯಾಲಯಕ್ಕೆ ದಾವೆ ಹೂಡಿ ರೈತ ರಂಗಯ್ಯ ಎಂಬುವರಿಗೆ ಸೇರಿದ ಜಮೀನು ಎಂದು ಆದೇಶವೂ ಕೂಡ ಹೊರಡಿಸಲಾಗಿದೆ.
ಇಷ್ಟಿದ್ದರೂ ಕೂಡ ಕಂದಾಯ ಇಲಾಖೆಯ ಹಣಬಾಕ ಅಧಿಕಾರಿಗಳ ಜೊತೆ ಮೈಸೂರಿನ ಭೂ ಮಾಫಿಯಾಗಳು ಶಾಮಿಲಾಗಿ ಕಳೆದ ಎರಡು ದಿನಗಳ ಹಿಂದೆ ನಂಜನಗೂಡಿನ ಸರ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆಗೂಡಿ ರೈತ ರಂಗಯ್ಯ ಮತ್ತು ಕುಟುಂಬಸ್ಥರು ಫಸಲು ಮಾಡಿರುವ ಉಳುವ ಭೂಮಿಗೆ ಸರ್ವೆ ಮಾಡಲು ತೆರಳಿದಾಗ ರಂಗಯ್ಯನ ಕುಟುಂಬದ ಮಹಿಳೆ ಭೂಮಾಫಿಯಗಳ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಮನಿಸಿದ ಭೂಮಾಫಿಯಗಳು ಮತ್ತು ಸರ್ವೆ ಅಧಿಕಾರಿಗಳು ರೈತ ಮಹಿಳೆಯ ಆರ್ಭಟಕ್ಕೆ ಕೃಷಿ ಭೂಮಿಯಿಂದ ಕಾಲ್ಕಿತ್ತಿರುವ ಘಟನೆ ನಡೆದಿದೆ.
ಈಗ ರೈತ ರಂಗಯ್ಯನ ಮಕ್ಕಳು ಸರ್ವೆ ಇಲಾಖೆಯ ಮುಖ್ಯಸ್ಥರು ಮತ್ತು ನಂಜನಗೂಡಿನ ತಹಶೀಲ್ದಾರ್ ರವರಿಗೆ ಭೂ ಮಾಫಿಯಗಳ ವಿರುದ್ಧ ದೂರು ನೀಡಿ ರಕ್ಷಣೆ ಕೋರುವುದರ ಜೊತೆಗೆ ಅನಧಿಕೃತವಾಗಿ ಪ್ರವೇಶ ಮಾಡುವ ಭೂಮಾಫಿಯಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಭೂ ಮಾಫಿಯಗಳ ವಿರುದ್ಧ ಜೊತೆ ಶಾಮೀಲಾಗಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.