ಗಾಜಾ: ಇಸ್ರೇಲ್ ಮತ್ತು ಹಮಾಸ್ ಸಂಘರ್ಷ ತೀವ್ರಗೊಂಡಿದೆ. ಅಕ್ಟೋಬರ್ 7 ರಂದು ಹಮಾಸ್ ದಾಳಿ ನಡೆಸಿದ ನಂತರ ಇಸ್ರೇಲ್ ಪ್ರತಿ ದಾಳಿ ಆರಂಭಿಸಿದ್ದು, ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಈ ಮಧ್ಯೆ ಇಸ್ರೇಲ್ನ ರಾಯಭಾರಿ, ಹಿರಿಯ ಸೇನಾ ಅಧಿಕಾರಿಗಳು ಸೇರಿದಂತೆ 150 ಜನರನ್ನು ಗಾಜಾದಾದ್ಯಂತ ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎನ್ನಲಾಗಿದೆ. ಆದರೆ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹಮಾಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೋಹಾದಿಂದ ಬುಧವಾರ ಸಿಎನ್ಎನ್ ನೊಂದಿಗೆ ಮಾತನಾಡಿದ ಇಜ್ಜತ್ ಅಲ್-ರಿಷೆಕ್, ನಮ್ಮ ಜನರ ವಿರುದ್ಧ ಇಸ್ರೇಲಿ ಆಕ್ರಮಣವು ಕೊನೆಗೊಂಡಾಗ ಮಾತ್ರ ನಾವು ಈ ವಿಷಯವನ್ನು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಇಸ್ರೇಲ್ ಮೇಲೆ ದಾಳಿ ನಡೆಸಲು ಇರಾನ್ ಅಥವಾ ಲೆಬನಾನ್ ನಿಂದ ನೆರವು ಪಡೆಯಲಾಗುತ್ತಿದೆ ಎಂಬ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ. ಯಾವುದೇ ಪ್ರಾದೇಶಿಕ ಸಹಾಯವಿಲ್ಲದೆ ಈ ಕಾರ್ಯಾಚರಣೆ ನಡೆಯುತ್ತಿದೆ. 100 ಪ್ರತಿಶತ ಹಮಾಸ್ ಕಾರ್ಯಾಚರಣೆಯಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಹೇಳಿದ್ದಾರೆ.
ಅದೇ ರೀತಿ ಹಮಾಸ್ನ ಸಶಸ್ತ್ರ ವಿಭಾಗ ಅಲ್-ಕಸ್ಸಾಮ್ ಬ್ರಿಗೇಡ್ನ ವಕ್ತಾರ ಅಬು ಒಬೈದಾ, ಕರಾವಳಿ ಎನ್ ಕ್ಲೇವ್ ನಲ್ಲಿರುವ ಜನರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ಆರಂಭಿಸಿದಲ್ಲಿ ನಾವು ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ ಎಂದು ಹೇಳಿದ್ದಾರೆ.
ಅದೇ ರೀತಿ ಇಡೀ ಜಗತ್ತೇ ನಮ್ಮ ಕಾನೂನಿನ ಮುಷ್ಠಿಯಲ್ಲಿರಲಿದೆ ಎಂದು ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಕೇವಲ ಆರಂಭವಷ್ಟೇ, ನಾವು ಇಡೀ ಪ್ರಪಂಚದಾದ್ಯಂತ ನಮ್ಮ ಪ್ರಭಾವವನ್ನು ಹೆಚ್ಚಿಸುತ್ತೇವೆ. ವಿಶ್ವದ 510 ಮಿಲಿಯನ್ ಚದರ ಕಿ.ಮೀ ಪ್ರದೇಶವು ನಮ್ಮ ಕಾನೂನಿನಡಿ ಬರಲಿದೆ ಎಂದು ಕಮಾಂಡರ್ ಹೇಳಿದ್ದಾರೆ.