ಗಾಜಿಯಾಬಾದ್, ಫೆ.3: ಪತ್ನಿ ಹಾಗೂ ಮೂವರು ಮಕ್ಕಳ ತಾಯಿಯನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಆಕೆಯ ಶವವನ್ನು ತನ್ನ ಗ್ರಾಮದ ಹೊರಗಿನ ಕೊಳದ ಬಳಿ ಹೂತುಹಾಕಿದ್ದನು.
ಜೆಸಿಬಿ ಸಹಾಯದಿಂದ ಗುರುವಾರ ತಡರಾತ್ರಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಜಿಯಾಬಾದ್ ನ ಭೋಜ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಫಜಲ್ಗರ್ ಗ್ರಾಮದಲ್ಲಿ ಜನವರಿ 25 ರಂದು ಈ ಘಟನೆ ನಡೆದಿದೆ.
ಆರೋಪಿಯನ್ನು ದಿನೇಶ್ ಪ್ರಜಾಪತಿ ಎಂದು ಗುರುತಿಸಲಾಗಿದ್ದು, ತರಕಾರಿ ಮಾರಾಟಗಾರನಾಗಿದ್ದು, ಸಂತ್ರಸ್ತೆಯನ್ನು ಮದುವೆಯಾಗಿ ಸುಮಾರು 13 ವರ್ಷಗಳಾಗಿವೆ.
ಜನವರಿ 30ರಂದು ದಿನೇಶ್ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದು, ಜನವರಿ 26ರಂದು ತರಕಾರಿ ಮಾರುಕಟ್ಟೆಗೆ ಹೋಗಿದ್ದಾಗ ಪತ್ನಿ ಅಂಜು ಮನೆಯಿಂದ ಹೊರಟಿದ್ದಳು. ನಂತರ ಪತ್ನಿ ತಮ್ಮ ತಾಯಿಯ ಮನೆಗೆ ಹೋಗಿದ್ದಾಳೆ ಎಂದು ತಮ್ಮ ಮಕ್ಕಳಿಗೆ ತಿಳಿಸಿದ್ದನು.
ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ, ದಂಪತಿಗಳು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ನಂತರ ಪೊಲೀಸರು ದಿನೇಶ್ ನನ್ನು ವಶಕ್ಕೆ ತೆಗೆದುಕೊಂಡರು, ವಿಚಾರಣೆ ನಡೆಸಿದಾಗ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಜನವರಿ 25 ರಂದು ಮುಂಜಾನೆ 4 ಗಂಟೆಗೆ ತರಕಾರಿ ಮಾರುಕಟ್ಟೆಗೆ ಹೋಗಲು ಎದ್ದಾಗ ತನ್ನ ಹೆಂಡತಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಂದು ಶವವನ್ನು ಮತ್ತೊಂದು ಕೋಣೆಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಮರುದಿನ ರಾತ್ರಿ ತನ್ನ ಮಕ್ಕಳು ಮಲಗಿದ್ದಾಗ ಶವವನ್ನು ಟಾಂಗಾದಲ್ಲಿ ಗ್ರಾಮದ ಹೊರಗೆ ಸಾಗಿಸಿದ್ದೇನೆ ಎಂದು ದಿನೇಶ್ ಬಹಿರಂಗಪಡಿಸಿದ್ದಾನೆ.