ಪ್ರೀತಿಸುತ್ತಿದ್ದ ಯುವಕನ ಮನೆಗೆ ಬಂದ ಯುವತಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಆತನ ಮೇಲೆ ಒತ್ತಡ ಹೇರಿದ್ದು, ಈ ವಿಷಯ ತಿಳಿದ ಹುಡುಗಿಯ ಸಹೋದರ ಆಕೆಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಮೊರಾದಾಬಾದ್ ಜಿಲ್ಲೆಯ ಭೋಜ್ಪುರದ ರಾಣಿನಾಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನೀಲಂ ಎಂಬಾಕೆ ಅದೇ ಗ್ರಾಮದ ಯುವಕ ಮೋಹಿತ್ ಯಾದವ್ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇದರ ಬಗ್ಗೆ ತಂದೆಗೆ ತಿಳಿಯುತ್ತಿದ್ದಂತೆ ಬೇರೆ ಕಡೆ ಮದುವೆ ಮಾಡಿಸಲು ಮುಂದಾಗಿದ್ದರು. ಈ ವಿಷಯ ಯುವತಿಗೆ ತಿಳಿದು ಪ್ರಿಯಕರನ ಮನೆಗೆ ಹೋಗಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ.
ಆತ ಬೇರೆ ಜಾತಿಗೆ ಸೇರಿದವನು ಎಂದು ಮನೆಯವರು ಹೇಳಿದರೂ ಯುವತಿ ಮಾತ್ರ ಆತನನ್ನೇ ಮದುವೆಯಾಗಲು ನಿರ್ಧರಿಸಿದಳು. ಇದರಿಂದ ಕೋಪಗೊಂಡಿರುವ ಆಕೆಯ ಸಹೋದರ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆಗೆ ಸಂಬಂಧಿಸಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಪ್ರಿಯಕರನ ತಂದೆ, ಯುವತಿಯ ತಂದೆ ಹಾಗೂ ಸಹೋದರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.