ಗೊಂಡಾ: ಉತ್ತರ ಪ್ರದೇಶದ ಗೊಂಡಾದಲ್ಲಿರುವ ದೇವಮಾನವ ಅಸಾರಾಂ ಬಾಪು ಅವರ ಆಶ್ರಮದೊಳಗೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಬಾಲಕಿಯ ಮೃತದೇಹವು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಾಲ್ಕು ದಿನಗಳ ಹಿಂದೆ ಬಾಲಕಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು ಮತ್ತು ಈಗ ಆಕೆಯ ದೇಹವು ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ಕಾರಿನೊಳಗೆ ಪತ್ತೆಯಾಗಿದೆ.
ಮೃತದೇಹದ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಾರಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಆಶ್ರಮದ ಸಿಬ್ಬಂದಿ ಕಾರಿನ ಬಾಗಿಲು ತೆರೆದಾಗ ಶವ ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ದುರ್ವಾಸನೆ ಬಂದ ಬಳಿಕ ಆಶ್ರಮದ ಕಾವಲುಗಾರ ಕಾರನ್ನು ತೆರೆದು ಶವವನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಆಶ್ರಮ ಮತ್ತು ವಾಹನವನ್ನು ತನಿಖೆ ನಡೆಸುತ್ತಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಕಾರಿನ ಸಮೇತ ಇಡೀ ಆಶ್ರಮವನ್ನು ಸೀಲ್ ಮಾಡಿ ತನಿಖೆ ಆರಂಭಿಸಿದ್ದಾರೆ. ಬಾಲಕಿಯನ್ನು ಕೊಂದು ಶವವನ್ನು ಮರೆಮಾಚಲು ಯತ್ನಿಸಿದಂತೆ ತೋರುತ್ತಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬರುತ್ತಿದೆ ಪೊಲೀಸರು ತಿಳಿಸಿದ್ದಾರೆ. ನಗರ ಕೊತ್ವಾಲಿ ಪ್ರದೇಶದ ಬಿಮಾರ್ ಗ್ರಾಮದಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ಕಳೆದ ಹಲವು ದಿನಗಳಿಂದ ಈ ಕಾರನ್ನು ನಿಲ್ಲಿಸಲಾಗಿತ್ತು.
2013ರಲ್ಲಿ ಜೋಧ್ ಪುರ ಆಶ್ರಮದಲ್ಲಿ 16 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ದೇವಮಾನವ ಅಸಾರಾಂ ಬಾಪು ಅತ್ಯಾಚಾರ ಅವರನ್ನು ತಪ್ಪಿತಸ್ಥನೆಂದು ಪರಿಗಣಿಸಿ 2018ರಲ್ಲಿ, ಜೋಧ್ ಪುರದ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.