ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಸೇರಿದಂತೆ ಇಬ್ಬರನ್ನು ತಲೆಕೆಳಗಾಗಿ ನೇತುಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಕಳ್ಳತನದ ಆರೋಪದ ಮೇಲೆ ಯುವಕರನ್ನು ತಲೆಕೆಳಗಾಗಿ ಕಟ್ಟಿದ್ದ ಕುರಿ ಶೆಡ್ ಮಾಲೀಕ ಅದರ ಕೆಳಗೆ ಬೆಂಕಿ, ಹೊಗೆ ಹಾಕಿದ್ದಾರೆ. ನಂತರ ಮನಬಂದಂತೆ ಇಬ್ಬರನ್ನು ಥಳಿಸಿದ್ದಾರೆ.
ಹೈದರಾಬಾದ್ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಮಂಚೇರಿಯಲ್ ಜಿಲ್ಲೆಯ ಮಂದಮರ್ರಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಚಿತ್ರಹಿಂಸೆಯ ವೀಡಿಯೋಗಳು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕುರಿ ಸಾಕಾಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ತೇಜ (19) ಮತ್ತು ಆತನ ದಲಿತ ಸ್ನೇಹಿತ ಕಿರಣ್ (30)ನನ್ನು ಕುರಿ ಸಾಕಾಣಿಕೆ ಕೇಂದ್ರ ಮಾಲೀಕರ ಕುಟುಂಬ ಸದಸ್ಯರು ಶೆಡ್ನಲ್ಲಿ ಚಿತ್ರಹಿಂಸೆ ನೀಡಿದ್ದಾರೆ.
ಸುಮಾರು 20 ದಿನಗಳ ಹಿಂದೆ ಶೆಡ್ ನಲ್ಲಿದ್ದ ಮೇಕೆ ಹಾಗೂ ಕೆಲವು ಕಬ್ಬಿಣದ ಸರಳು ಕಳವಾಗಿತ್ತು. ಇದೇ ಸಂಶಯದ ಮೇಲೆ ಕುರಿರ ಸಾಕಾಣಿಕೆ ಕೇಂದ್ರದ ಮಾಲೀಕ ಕೊಮುರಾಜುಲ ರಾಮುಲು ಮತ್ತು ಆತನ ಕುಟುಂಬಸ್ಥರು ಯುವಕರನ್ನು ಥಳಿಸಿದ್ದಾರೆ. ಪೊಲೀಸರು ರಾಜು ಮತ್ತು ಆತನ ಕುಟುಂಬದವರ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.