ಬಂಟ್ವಾಳ: ತಾಲೂಕಿನಲ್ಲಿ ಕಳೆದ ಒಂದು ವರ್ಷದ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಜ್ಯ ಕಳ್ಳನೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೋಲಿಸರ ತಂಡ ಬಂಧಿಸಿದೆ.
ಕಣ್ಣೂರು ನಿವಾಸಿ ಮಹಮ್ಮದ್ ಅಲಕ್ಕೋಡು ಎಂಬಾತನೇ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 4.50 ಲಕ್ಷದ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. 2021 ರ ಜನವರಿ 30 ರಂದು ಅಜಿಲಮೊಗರು ನಿವಾಸಿ ಖಾದರ್ ಅವರ ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಕುಖ್ಯಾತ ಕಳ್ಳ
ಮಹಮ್ಮದ್ ಅಲಕ್ಕೋಡು ಕುಖ್ಯಾತ ಕಳ್ಳನಾಗಿದ್ದು,ಈತನಮೇಲೆ ಕೇರಳ ರಾಜ್ಯದಲ್ಲಿ 200 ಕ್ಕೂ ಅಧಿಕ ಕಳವು ಪ್ರಕರಣ ದಾಖಲಾಗಿದೆ. ಜೊತೆಗೆ ದ.ಕ.ಜಿಲ್ಲೆಯಲ್ಲಿ ಇದೀಗ ಕಳ್ಳತನ ಅಕೌಂಟ್ ಓಪನ್ ಮಾಡಿದ್ದು, ಹತ್ತುಕ್ಕೂ ಅಧಿಕ ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಪೋಲೀಸರಿಗೆ ತನಿಖೆ ವೇಳೆ ಬಯಲಾಗಿದೆ.
ಬಂಧಿತನ ವಿಚಾರಣೆಯ ಬಳಿಕ ಇನ್ನಷ್ಟು ಕಳವು ಪ್ರಕರಣದ ಮಾಹಿತಿ ಲಭ್ಯವಾಗುವ ಸಾಧ್ಯತೆಗಳಿವೆ. ಎಸ್. ಪಿ.ಹೃಷಿಕೇಶ್ ಸೋನಾವಣೆ ಅವರ ನಿರ್ದೇಶನದಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಹಾಗೂ ಎಸ್ .ಐ.ಹರೀಶ್ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.