ಕಲಘಟಗಿ: ನೀರು ಅಮೂಲ್ಯವಾದುದು, ರೈತರ ನಿಜವಾದ ಜೀವನಾಡಿ, ಜಲ ಬಹಳ ಮುಖ್ಯವಾದುದು, ಗಂಗೆ ಇಲ್ಲದೇ ಜೀವನ ನಡೆಯುವುದಿಲ್ಲ. ರೈತರಿಗೆ ಒಳ್ಳೆಯ ಮಣ್ಣು, ಒಳ್ಳೆಯ ನೀರು ಇದ್ದರೆ ಚಿನ್ನದಂತಹ ಬೆಳೆಯನ್ನು ತೆಗೆಯುತ್ತಾರೆ. ಒಳ್ಳೆಯ ಆಹಾರ ಮತ್ತು ಜೀವನಕ್ರಮ ಇದ್ದರೆ ರೋಗಮುಕ್ತ ಜೀವನ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನುಡಿದರು.
ಕಲಘಟಗಿಯ ಹನ್ನೆರಡು ಮಠದ ಹತ್ತಿರ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕಲಘಟಗಿ ತಾಲೂಕು ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯತ್ ಮತ್ತು ಕೆರೆ ಅಭಿವೃದ್ಧಿ ಸಮಿತಿ ಬೆಲವಂತರ ಹಾಗೂ ಬೇಗೂರ (ತುಮರಿಕೊಪ್ಪ) ಇದರ ಸಹಭಾಗಿತ್ವದಲ್ಲಿ “ನಮ್ಮೂರು ನಮ್ಮ ಕೆರೆ” ಹಸ್ತಾಂತರ ಹಾಗೂ ಯೋಜನೆಯ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೆರೆಗಳ ಬಗ್ಗೆ ಸ್ವಲ್ಪ ಅಸಡ್ಡೆ ಮಾಡಿದ್ದೇವೆ, ಕೆರೆಗಳು ಹೂಳು ತುಂಬಿಕೊಂಡಿರುತ್ತವೆ. “ನಮ್ಮೂರು ನಮ್ಮ ಕೆರೆ” ಮುಖಾಂತರ ನಾವು ವಿವಿಧ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಅದರ ಸುತ್ತಮುತ್ತ ಗಿಡಮರಗಳನ್ನು ನೆಡಬೇಕು. ಗ್ರಾಮ ಉತ್ತಮ ಅಭಿವೃದ್ಧಿ ಹೊಂದಲು ನೀರು ಬೇಕು, ನೀರು ಬೇಕಾದರೆ ಕೆರೆ ಬೇಕು, ಕೆರೆ ಸಂರಕ್ಷಣೆಗೆ ನಾವು ನೀವೆಲ್ಲರೂ ಮನಸ್ಸು ಮಾಡಬೇಕು ಎಂದರು.