ರಾಂಚಿ: ಜಾರ್ಖಂಡ್ನ ಲತೇಹರ್ ಜಿಲ್ಲೆಯಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಬಳಸುತ್ತಿದ್ದ 10 ವಾಹನಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ನಿರ್ಮಾಣ ಕಂಪೆನಿಯೊಂದಕ್ಕೆ ಸೇರಿದ ಹಿಟಾಚಿ ಮತ್ತು ಟ್ಯಾಂಕರ್ ಸೇರಿದಂತೆ ಎಂಟು ವಾಹನಗಳಿಗೆ ಮಹುದನರ್ ಠಾಣೆ ವ್ಯಾಪ್ತಿಯ ಬಸ್ಕರ್ಚಾ ಗ್ರಾಮದಲ್ಲಿ ಮಾವೋವಾದಿಗಳು ಶನಿವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನೆರಡು ವಾಹನಗಳಿಗೆ ಪೊಟ್ಮಾದಿಹ್ನಲ್ಲಿ ಬೆಂಕಿ ಹಚ್ಚಲಾಗಿದೆ.
‘ಮಾವೋವಾದಿಗಳು ಈ ಸಂಬಂಧ ಕರಪತ್ರ ಅಂಟಿಸಿದ್ದು, ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ. ಸುಲಿಗೆ ಮಾಡಿ ಬಳಿಕ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜೇಶ್ ಕುಜುರ್ ಹೇಳಿದ್ದಾರೆ.
‘ಮಾವೋವಾದಿಗಳನ್ನು ಸೆರೆ ಹಿಡಿಯಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.