ರಾಂಚಿ: ಜಾರ್ಖಂಡ್ನ ಗಿರಿಹ್ ಜಿಲ್ಲೆಯಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿ ಹಾರಿ ಆತ್ಮಹತ್ಯೆ ಯತ್ನಿಸಿದ್ದು, ಘಟನೆಯಲ್ಲಿ ದುರದೃಷ್ಟವಶಾತ್ ತಾಯಿ ಬದುಕುಳಿದು, ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ.
ಜಿಲ್ಲೆಯ ದಿಯೋರಿ ಗ್ರಾಮದ ಚಿಕು(2), ಸುಹಾನಿ(5) ಮೃತಪಟ್ಟಿದ್ದು, ತಾಯಿ ಮಮತಾ ದೇವಿ(25) ಸಣ್ಣಪುಟ್ಟ ಗಾಯಗಳಾಗಿವೆ.
ಕೌಟುಂಬಿಕ ಕಲಹದಿಂದ ಮಹಿಳೆ ನಿನ್ನೆ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಬಾವಿಗೆ ಹಾರಿದ್ದಾಳೆ. ಸುದ್ದಿ ತಿಳಿದ ಅಕ್ಕಪಕ್ಕದವರು ಕೂಡಲೇ ಮೂವರನ್ನು ಬಾವಿಯಿಂದ ಹೊರತೆಗೆದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರಾದರೂ ಇಬ್ಬರೂ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ತಾಯಿ ಮಮತಾ ದೇವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಲೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಸಂತೋಷ್ ಕುಮಾರ್ ಮಂಡಲ್ ತಿಳಿಸಿದ್ದಾರೆ