ರಾಂಚಿ : ವಾಮಾಚಾರ ಮಾಡುತ್ತಾಳೆ ಎನ್ನುವ ಗುಮಾನಿಯಿಂದ ವೃದ್ಧೆಯನ್ನು ಜೀವಂತ ದಹನ ಮಾಡಲು ಯತ್ನಿಸಿದ ಪ್ರಕರಣ ಜಾರ್ಖಂಡ್ ರಾಜ್ಯದ ಸಿಮ್ದೇಗ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತೆಯನ್ನು ಜರಿಯೊ ದೇವಿ ಎಂದು ಗುರುತಿಸಲಾಗಿದೆ. ಆಕೆಯನ್ನು ಊರಿನ ಕೆಲವು ಮಂದಿ ರಾತ್ರಿ ಭೋಜನಕ್ಕೆ ಆಹ್ವಾನಿಸಿದ್ದರು. ಊರಿನಲ್ಲಿ ಮಹಿಳೆಯೋರ್ವರು ತೀರಿಕೊಂಡಿದ್ದ ಪ್ರಯುಕ್ತ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಜರಿಯೊ ದೇವಿ ರಾತ್ರಿ ಊಟ ಮಾಡಲೆಂಡು ಅಲ್ಲಿಗೆ ಬಂದಿದ್ದರು. ನಿಧನ ಹೊಂದಿದ್ದ ಮಹಿಳೆಯ ಪತಿ ತನ್ನ ಮಡದಿ ಸಾವಿಗೆ ವೃದ್ಧೆ ಮಾಡಿಸಿದ ಮಾಟ ಕಾರಣ ಎಂದು ಆರೋಪಿಸಿದರು. ಜನರು ನೋಡುತ್ತಿದ್ದಂತೆಯೇ ಸಂಬಂಧಿಕರ ಗುಂಪೊಂದು ವೃದ್ಧೆಯನ್ನು ಎತ್ತಿಕೊಂಡು ಹುಲ್ಲಿನ ಮೆದೆ ಬಳಿಗೆ ಕರೆದೊಯ್ದಿತ್ತು.
ಅಲ್ಲಿ ವೃದ್ಧೆ ಮೈ ಮೇಲೆ ಸೀಮೆ ಎಣ್ನೆ ಎರಚಿ ಹುಲ್ಲಿನ ಮೆದೆ ಜೊತೆಗೆ ಬೆಂಕಿ ಹಚ್ಚಲಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಗ್ರಾಮಸ್ಥರು ವೃದ್ಧೆಯನ್ನು ಪಾರು ಮಾಡು ಆಸ್ಪತ್ರೆಗೆ ದಾಖಲಿಸಿದ್ದರು. ವೃದ್ಧೆ ಅಪಾಯದಿಂದ ಪಾರಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.