ನಾಗ್ಪುರ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್ ಪೂಜಾರಿ, ಸದ್ಯ ಭಯೋತ್ಪಾದಕ ಕೇಸಿನಲ್ಲಿ ದೋಷಿಯಾಗಿ ಕರ್ನಾಟಕದ ಜೈಲಿನಲ್ಲಿರುವ ಉಗ್ರ ಅಫ್ಸರ್ ಪಾಷಾ ಜತೆ ಸಂಪರ್ಕದಲ್ಲಿದ್ದಾನೆ. ಅಲ್ಲದೇ ಬೆದರಿಕೆ ಕರೆ ಮಾಡಿದಾಗ ಪಾಷಾ ಜತೆಗೇ ಪೂಜಾರಿ ಬೆಳಗಾವಿ ಜೈಲಿನಲ್ಲಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಹೀಗಾಗಿ ಇದು ಭಯೋತ್ಪಾಕರ ಕುಮ್ಮಕ್ಕಿನ ಮೇಲೆ ನಡೆದ ಬೆದರಿಕೆಯೇ ಎಂಬ ಕುರಿತು ತನಿಖೆ ಚುರುಕುಗೊಳಿಸಲಾಗಿದೆ. ಹೀಗಾಗಿ ಪಾಷಾನನ್ನು ಬಂಧಿಸಲು ನಾಗ್ಪುರ ಪೊಲೀಸರ ತಂಡವು ಕರ್ನಾಟಕಕ್ಕೆ ರವಾನೆಯಾಗಿದೆ ಎಂದು ನಾಗ್ಪುರದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಳಗಾವಿ ಜೈಲಿನಲ್ಲಿದ್ದ ಕೈದಿ ಜಯೇಶ್ ಪೂಜಾರಿ, ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಕಳೆದ ಜನವರಿಯಲ್ಲಿ ಕರೆ ಮಾಡಿ, ತಾನು ದಾವೂದ್ ಇಬ್ರಾಂಹಿ ಗ್ಯಾಂಗ್ ಸದಸ್ಯ ಹಾಗೂ 100 ಕೋಟಿ ರು. ಕೊಡದಿದ್ದರೆ ಕೊಲೆ ಮಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಆತನನ್ನು ಬೆಳಗಾವಿ ಜೈಲಿಂದ ನಾಗ್ಪುರಕ್ಕೆ ಕರೆತರಲಾಗಿತ್ತು. ಪ್ರಕರಣದ ತನಿಖೆ ವೇಳೆ ಜಮ್ಮು- ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಹಾಗೂ ಅವರಿಗೆ ಸಹಾಯ ಮಾಡಿದ್ದ ಕೇಸಲ್ಲಿ ಅಪರಾಧಿಯಾಗಿ ಬಂಧಿತನಾಗಿರುವ ಪಾಷಾ ಜತೆ ಪೂಜಾರಿ ಸಂಪರ್ಕದಲ್ಲಿದ್ದಾನೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.