ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ಶನಿವಾರ ಭೇಟಿ ನೀಡಿ ಅವ್ಯವಸ್ಥೆ ಕಂಡು ವಾರ್ಡನ್ರನ್ನು ತರಾಟೆಗೆ ತೆಗೆದುಕೊಂಡರು.
ವಿದ್ಯಾರ್ಥಿಗಳು ಶಾಸಕರ ಎದುರು ವಸತಿ ನಿಲಯದ ಸಮಸ್ಯೆಗಳನ್ನು ಬಿಚ್ಚಿಟ್ಟರು. ನಿಲಯದ ಅಡುಗೆ ಕೋಣೆ ಹಾಗೂ ಆಹಾರ ಪದಾರ್ಥಗಳನ್ನು ಶಾಸಕರು ಪರಿಶೀಲಿಸಿದರು. ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದ ಆಹಾರವನ್ನು ಮಕ್ಕಳೊಂದಿಗೆ ಸೇವಿಸಿದರು. ಸಾಂಬಾರ್ನಲ್ಲಿ ಒಂದೇ ಒಂದೂ ತರಕಾರಿ ಹಾಕಿಲ್ಲ ಯಾಕೆ ಎಂದು ವಾರ್ಡನ್ರನ್ನು ಪ್ರಶ್ನಿಸಿದರು.
ಶಿಕ್ಷಕರು ಸಮಾಜವನ್ನು ತಿದ್ದುವ ಶಿಲ್ಪಿಗಳಾಗಿರಬೇಕು. ಆದರೆ, ಶಿಕ್ಷಕರಾದ ನೀವೇ ಮಕ್ಕಳಿಗೆ ತರಕಾರಿ ಇಲ್ಲದ ಆಹಾರ ನೀಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು. ಮಕ್ಕಳು ದೇವರಿದ್ದಂತೆ. ಮಕ್ಕಳಿಗೆ ಮೋಸ ಮಾಡುತ್ತಿರುವ ನಿಮ್ಮನ್ನು ಭಗವಂತ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.
ಈ ಶಾಲೆಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶದ ಬಡವರ ಮಕ್ಕಳೇ ಹೆಚ್ಚಾಗಿ ಓದುತ್ತಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಹಾರದಲ್ಲಿ ಯಾವುದೇ ವ್ಯತ್ಯಾಸ ಕಂಡರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಗಭೂಷಣ ಸಂಗಮ್, ಗಿರೀಶ ತುಂಬಾ, ಗೋಪಾಲಕೃಷ್ಣ ಮೋಹಳೆ, ಜ್ಞಾನದೇವ ಧೂಮಾಳೆ, ಸಂಜು ವಾಡೇಕರ್, ಪ್ರಕಾಶ ಮಣಿಗೀರೆ, ರಾಹುಲ್ ಪಾಟೀಲ ಹಾಗೂ ಸಾಗರ ಭೂರಿ ಇದ್ದರು.