ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಹತ್ತು ಹೊಸ ಸದಸ್ಯರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನೇಮಿಸಿದ್ದಾರೆ. ಈ ಪೈಕಿ ಎಂಟು ಜನರು ಈ ಹಿಂದೆ ರಾಜ್ಯ ಘಟಕಗಳ ಅಧ್ಯಕ್ಷರಾಗಿದ್ದವರಾಗಿದ್ದಾರೆ. ಬಂಡಿ ಸಂಜಯ್ ಕುಮಾರ್, ದೀಪಕ್ ಪ್ರಕಾಶ್, ಸತೀಶ್ ಪೂನಿಯಾ, ಸಂಜಯ್ ಜೈಸ್ವಾಲ್, ಸೋಮು ವೀರರಾಜು, ಸುರೇಶ್ ಕಶ್ಯಪ್, ವಿಷ್ಣುದೇವ್ ಸಾಯಿ, ಅಶ್ವನಿ ಶರ್ಮಾ ಅವರು ಕ್ರಮವಾಗಿ ತೆಲಂಗಾಣ, ಜಾರ್ಖಂಡ್, ರಾಜಸ್ಥಾನ, ಬಿಹಾರ, ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶ, ಛತ್ತೀಸಗಡ ಮತ್ತು ಪಂಜಾಬ್ ಬಿಜೆಪಿ ಘಟಕಗಳ ಮಾಜಿ ಅಧ್ಯಕ್ಷರಾಗಿದ್ದವರು.
ಇವರನ್ನು ಕಾರ್ಯಕಾರಿಣಿಗೆ ನೇಮಿಸಲಾಗಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ. ಇದರೊಂದಿಗೆ ಛತ್ತೀಸಗಢದ ಧರ್ಮಲಾಲ್ ಕೌಶಿಕ್, ರಾಜಸ್ಥಾನದ ಕಿರೋಡಿ ಲಾಲ್ ಮೀನಾ ಸಹ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೊಸ ಸದಸ್ಯರಾಗಿ ನೇಮಕಗೊಂಡಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಈ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.