ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 9 ವರ್ಷಗಳ ಸಾಧನೆಗಳನ್ನು ಜನಮಾನಸದಲ್ಲಿ ಪ್ರಚಲಿತಗೊಳಿಸುವ ಸಲುವಾಗಿ ಪಕ್ಷ ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಮಹಾಸಂಪರ್ಕ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮವು ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್ ರವರ ಅಧ್ಯಕ್ಷತೆಯಲ್ಲಿ ಮಂಡಲ ಕಛೇರಿಯಲ್ಲಿ ನಡೆಯಿತು.
ಅಭಿಯಾನದ ಸರಣಿ ಕಾರ್ಯಕ್ರಮಗಳ ಗ್ರಾಮಾಂತರ ಮಂಡಲ ಉಸ್ತುವಾರಿ ರೇಶ್ಮಾ ಉದಯ ಶೆಟ್ಟಿ ಮಾತನಾಡಿ, ಪಕ್ಷದ ಸೂಚನೆಯಂತೆ ಮಂಡಲ ಮಟ್ಟದಲ್ಲಿ ಹಿರಿಯ ಬಿಜೆಪಿಗರ ಸಮಾವೇಶ, ವ್ಯಾಪಾರಸ್ಥರ ಸಮಾವೇಶ, ಮಂಡಲ ಕಾರ್ಯಕಾರಿಣಿ ಸಭೆಯ ಸಹಿತ ಕೇಂದ್ರ ಸರಕಾರದ 9 ವರ್ಷಗಳ ಸಾಧನೆ ಪ್ರಚುರಪಡಿಸುವ ಕರಪತ್ರ ವಿತರಣೆ, ಮನೆ ಮನೆ ಭೇಟಿ ಹಾಗೂ ಮಂಡಲ ವ್ಯಾಪ್ತಿಯ 100 ಮಂದಿ ಪ್ರಮುಖರು ಮತ್ತು ವೃತ್ತಿಪರರ ತಂಡ ರಚನೆ ಮಾಡಲಾಗುವುದು.
ಪ್ರತೀ ಬೂತ್ ವ್ಯಾಪ್ತಿಯಲ್ಲಿ 100 ಮಂದಿ ಸಕ್ರಿಯ ಕಾರ್ಯಕರ್ತರ ತಂಡ ರಚನೆ, ಮಂಡಲ ಪದಾಧಿಕಾರಿಗಳ ಸೌಹಾರ್ದ ಕೂಟ ಆಯೋಜನೆ ಮತ್ತು ಮಂಡಲದ ಸೋಷಿಯಲ್ ಮೀಡಿಯಾ ತಂಡವನ್ನು ಸಕ್ರಿಯಗೊಳಿಸುವುದು ಇವೇ ಮುಂತಾದ ಪ್ರಮುಖ ಕಾರ್ಯ ಯೋಜನೆಗಳನ್ನು ಜುಲೈ ತಿಂಗಳ ಅಂತ್ಯದೊಳಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಮನೆ ಮನೆ ಸಂಪರ್ಕದ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನಪರ ಆಡಳಿತ ಹಾಗೂ ರಾಜ್ಯ ಸರಕಾರದ ಆಡಳಿತ ವೈಫಲ್ಯ ಮತ್ತು ಜನವಿರೋಧಿ ನೀತಿಯನ್ನು ಜನತೆಗೆ ಮನದಟ್ಟು ಮಾಡುವ ಮೂಲಕ ಮುಂದಿನ ತಾ.ಪಂ., ಜಿ.ಪಂ. ಮತ್ತು ಲೋಕಸಭಾ ಚುನಾವಣೆಯಲ್ಲಿ ಮಗದೊಮ್ಮೆ ಬಿಜೆಪಿಯ ದೊಡ್ಡ ಅಂತರದ ಗೆಲುವಿಗೆ ಸಂಘಟಿತರಾಗಿ ಶ್ರಮಿಸುವಂತೆ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 9 ವರ್ಷಗಳ ಸಾಧನೆಗಳ ವಿವರಗಳನ್ನೊಳಗೊಂಡಿರುವ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್ ಪೂಜಾರಿ, ಗಣೇಶ್ ಕುಲಾಲ್, ಕಾರ್ಯದರ್ಶಿ ಸುರೇಶ್ ಪೂಜಾರಿ, ಬ್ರಹ್ಮಾವರ ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ದೇವಾನಂದ್, ಪ್ರಮುಖರಾದ ರಾಜೇಶ್ ಶೆಟ್ಟಿ ಬಿರ್ತಿ, ರಾಜು ಪೂಜಾರಿ ಉಪ್ಪೂರು ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.