ನವದೆಹಲಿ: ಜಿ 20 ಶೃಂಗಸಭೆಗಾಗಿ ದೆಹಲಿಯನ್ನು ಸ್ವಚ್ಛ ಮಾಡಲು ಎಂಸಿಡಿ 311 ಆ್ಯಪ್ಗಳು, 12 ಸಾವಿರ ಕಾರ್ಮಿಕರು ಮತ್ತು 95 ಯಂತ್ರಗಳನ್ನು ಬಳಸಲಾಗಿದೆ ಎಂದು ಮೇಯರ್ ಹೇಳಿದರು.
ಜಿ 20 ಶೃಂಗಸಭೆಗಾಗಿ ದೆಹಲಿಯ ಸುಂದರೀಕರಣ, ಸ್ವಚ್ಛತೆಗಾಗಿ ನಾವು 12 ಸಾವಿರ ಕಾರ್ಮಿಕರನ್ನು ಕರ್ತವ್ಯದಲ್ಲಿ ನಿಯೋಜಿಸಿದ್ದೇವೆ. ಕೇಂದ್ರ ವಲಯದಲ್ಲಿ 1500 ಕಾರ್ಮಿಕರು, ದಕ್ಷಿಣ ವಲಯದಲ್ಲಿ 1000 ಕಾರ್ಮಿಕರು, ನಜಾಫ್ಗಢ ವಲಯದಲ್ಲಿ 1500 ಕಾರ್ಮಿಕರು, ಪ್ರಗತಿ ಮೈದಾನದ ಸುತ್ತಮುತ್ತಲಿನ 250 ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 55 ಸಾವಿರಕ್ಕೂ ಹೆಚ್ಚು ನೌಕರರು ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಮೇಯರ್ ಹೇಳಿದರು.
ದೆಹಲಿಯ ರಸ್ತೆಗಳನ್ನು ಸ್ವಚ್ಛಗೊಳಿಸಲು ಎಂಸಿಡಿಯ 52 ಮೆಕ್ಯಾನಿಕಲ್ ರಸ್ತೆ ಗುಡಿಸುವ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ದೆಹಲಿಯ ರಾಜ್ಘಾಟ್ ಮಾರ್ಗ, ಜವಾಹರಲಾಲ್ ಮಾರ್ಗ, ಮೃಗಾಲಯ ಪ್ರದೇಶ, ಭೈರವ್ ಮಾರ್ಗ, ವಿಕಾಸ್ ಮಾರ್ಗ ಮತ್ತು ತಿಲಕ್ ಮಾರ್ಗವನ್ನು ಸ್ವಚ್ಛಗೊಳಿಸಲು 250 ಕ್ಕೂ ಹೆಚ್ಚು ಕಾರ್ಮಿಕರನ್ನು ನಿಯೋಜಿಸಲಾಗಿದೆ. ಕುತುಬ್ ಮಿನಾರ್, ಕೆಂಪು ಕೋಟೆ ಸೇರಿದಂತೆ ರಾಜಧಾನಿಯ ಐತಿಹಾಸಿಕ ಸ್ಥಳಗಳ ಸುತ್ತಲಿನ ಪ್ರದೇಶಗಳ ಸ್ವಚ್ಛತೆಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಮೇಯರ್ ಹೇಳಿದರು.
ಉಪಮೇಯರ್ ಆಲೆ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ‘ಎಂಸಿಡಿ-311’ ಆ್ಯಪ್ ಮೂಲಕ ಎಂಸಿಡಿ 12 ಸಾವಿರಕ್ಕೂ ಹೆಚ್ಚು ಕಸದ ಕೊಂಪೆಗಳನ್ನು ಗುರುತಿಸಿ ಸ್ವಚ್ಛಗೊಳಿಸಿದೆ ಎಂದು ತಿಳಿಸಿದರು. ಸಭಾನಾಯಕ ಮುಖೇಶ್ ಗೋಯಲ್ ಮಾತನಾಡಿ, ಮನೆ-ಮನೆ ಕಸ ಸಂಗ್ರಹಣೆ, ಸುಂದರೀಕರಣ, ರಸ್ತೆಗಳ ಸ್ವಚ್ಛತೆಗೆ ಸಂಬಂಧಿಸಿದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ದೆಹಲಿಯು ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿದ್ದು, ಇದು ಇಡೀ ದೇಶಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಮೇಯರ್ ಹೇಳಿದರು.