ದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಬುಡವನ್ನು ಉಳಿಸಿಕೊಳ್ಳುಶತಾಯಗತಾಯ ಪ್ರಯತ್ನಿಸುತ್ತಿದೆ. ಕರ್ನಾಟಕದ ಗೆಲುವಿನ ಓಟ ಮುಂದುವರಿಸಲು ಕಾಂಗ್ರೆಸ್, ಸಮರಾಭ್ಯಾಸಕ್ಕೆ ಇಂದು ಕಹಳೆ ಮೊಳಗಿಸ್ತಿದೆ.
ರಾಜ್ಯ ಕಾಂಗ್ರೆಸ್ ನಾಯಕರ ದಂಡು, ಡೆಲ್ಲಿಯಲ್ಲಿ ಟೆಂಟ್ ಹಾಕಿದೆ. ಇಂದು ಇಡೀ ದಿನ ರಾಜ್ಯ ಕೈ ಪಡೆ ಜೊತೆ ರಂಗ ತಾಲೀಮು ನಡೆಯಲಿದ್ದು, ಸರಣಿ ಚುನಾವಣೆಗಳಿಗೆ ರಣನೀತಿ ಸಿದ್ಧಗೊಳ್ಳಲಿದೆ.
ಹೈಕಮಾಂಡ್ ರಾಜ್ಯ ನಾಯಕರಿಗೆ ನಿಗದಿತ ಟಾರ್ಗೆಟ್ ನೀಡಲಿದೆ. ಇಂದು ಬೆಳಗ್ಗೆಯಿಂದಲೇ ಮೀಟಿಂಗ್ ನಡೆಯಲಿದೆ. ರಾಹುಲ್-ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಿಎಂ, ಡಿಸಿಎಂ, ಸಚಿವರ ಜೊತೆಯಲ್ಲಿ ಮಾತುಕತೆ ಆಗಲಿದೆ. ಸರ್ಕಾರದ ಭಾಗವಾಗಿರುವರನ್ನ ಬಿಟ್ಟು ಪ್ರಮುಖ ನಾಯಕರಿಗೂ ವರಿಷ್ಠರು ಆಹ್ವಾನ ಕೊಟ್ಟಿದ್ದಾರೆ. ಹೀಗಾಗಿ ಒಟ್ಟು 37 ನಾಯಕರನ್ನ ಬುಲಾವ್ ನೀಡಿರುವ ಈ ಸಭೆ ಬಗ್ಗೆ ಸದ್ಯ ಕುತೂಹಲ ಹೆಚ್ಚಿಸಿದೆ.
2 ಹಂತದಲ್ಲಿ ಸಭೆ ನಡೆಯಲಿದ್ದು, ಎರಡೂ ಸಭೆಗಳ ಮುಖ್ಯ ವಿಚಾರ ಲೋಕಸಭೆ ಚುನಾವಣೆ ಸಿದ್ಧತೆ. ಮೊದಲಿಗೆ ರಾಹುಲ್, ಮಲ್ಲಿಕಾರ್ಜುನ ಖರ್ಗೆ ಜತೆಗೆ ಸಿಎಂ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್, ಡಿಸಿಎಂ ಡಿಕೆಶಿ, ರಾಜ್ಯ ಕೈ ಉಸ್ತುವಾರಿ ಸುರ್ಜೇವಾಲಾ, ಎಐಸಿಸಿ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿ 15 ಮಂದಿ ಪ್ರಮುಖ ಸಚಿವರೊಂದಿಗೆ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.