ಮಂಗಳೂರು: ಸಮುದ್ರ ವಿಹಾರಕ್ಕೆಂದು ಬಂದಿದ್ದ ವೈದ್ಯ ಸಮುದ್ರಪಾಲಾದ ಘಟನೆ ಉಳ್ಳಾಲ ಸೋಮೇಶ್ವರದ ರುದ್ರಪಾದೆಯಲ್ಲಿ ನಡೆದಿದೆ.
ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂಟರ್ನಿಷಿಪ್ ಮಾಡುತ್ತಿದ್ದ ಡಾ. ಆಶೀಕ್ ಗೌಡ (30) ತನ್ನ ಐವರು ಸ್ನೇಹಿತರೊಂದಿಗೆ ಉಳ್ಳಾಲ ಸೋಮೇಶ್ವರ ರುದ್ರಪಾದೆಗೆ ಸಮುದ್ರ ವಿಹಾರಕ್ಕಾಗಿ ಭಾನುವಾರ ತಡರಾತ್ರಿ ಬಂದಿದ್ದರು. ಈ ವೇಳೆ ಜೊತೆಗಿದ್ದ ಡಾ.ಪ್ರದೀಪ್ ಎಂಬುವರು ಬಂಡೆಯ ಮೇಲಿಂದ ಬಿದ್ದಿದ್ದು, ಕೆಳಗೆ ಬಂಡೆಯನ್ನು ಹಿಡಿದು ಸಹಾಯಕ್ಕೆ ಯಾಚಿಸಿದ್ದರು. ಪ್ರದೀಪ್ ರಕ್ಷಣೆಗೆ ಪ್ರಯತ್ನಿಸಿದ್ದ ಡಾ.ಆಶೀಕ್ ಗೌಡ ಕಾಲುಜಾರಿ ಸಮುದ್ರಕ್ಕೆ ಬಿದ್ದು ನೀರು ಪಾಲಾಗಿದ್ದಾರೆ. ಆದರೆ ಕಲ್ಲುಗಳ ಆಸರೆ ಪಡೆದಿದ್ದ ಡಾ. ಪ್ರದೀಪ ಮೇಲೆ ಬಂದಿದ್ದಾರೆ. ನಂತರ ಪ್ರದೀಪ್ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಒದಗಿಸಿದ್ದರು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.