ನವದೆಹಲಿ: ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ದೇಶ ಇಂದು ‘ಸಂವಿಧಾನ ದಿನ’ವನ್ನು ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಐತಿಹಾಸಿಕ ದಿನಾಂಕದ ಮಹತ್ವಕ್ಕೆ ಸೂಕ್ತ ಮಾನ್ಯತೆ ನೀಡುವ ಪ್ರಧಾನಮಂತ್ರಿಯವರ ದೂರದೃಷ್ಟಿ ಆಧರಿಸಿ, 2015ರಿಂದ ‘ಸಂವಿಧಾನ ದಿನ’ ಆಚರಣೆ ಸಂಪ್ರದಾಯ ಪ್ರಾರಂಭಿಸಲಾಯಿತು.
ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತು ಮತ್ತು ವಿಜ್ಞಾನ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮತ್ತು ಲೋಕಸಭಾ ಸ್ಪೀಕರ್ ಭಾಗವಹಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣದ ನಂತರ, ಅವರು ಸಂವಿಧಾನದ ಪೀಠಿಕೆ ವಾಚನ ಮಾಡಲಿದ್ದು, ರಾಷ್ಟ್ರಾದ್ಯಂತ ಜನರು ಅವರೊಂದಿಗೆ ಲೈವ್ ಆಗಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಸಂವಿಧಾನ ರಚನಾ ಸಭೆಯ ಚರ್ಚೆಗಳ ಡಿಜಿಟಲ್ ಆವೃತ್ತಿ, ಭಾರತದ ಸಂವಿಧಾನದ ಕ್ಯಾಲಿಗ್ರಾಫ್ ಪ್ರತಿಯ ಡಿಜಿಟಲ್ ಆವೃತ್ತಿ ಮತ್ತು ಇಲ್ಲಿಯವರೆಗಿನ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡಿರುವ ಭಾರತದ ಸಂವಿಧಾನದ ನವೀಕರಿಸಿದ ಆವೃತ್ತಿಯನ್ನು ರಾಷ್ಟ್ರಪತಿಗಳು ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ ‘ಸಾಂವಿಧಾನಿಕ ಪ್ರಜಾಪ್ರಭುತ್ವ ಕುರಿತ ಆನ್ಲೈನ್ ರಸಪ್ರಶ್ನೆ’ಯನ್ನು ಉದ್ಘಾಟಿಸಲಿದ್ದಾರೆ.
ಸಂವಿಧಾನ ದಿನ ಹಾಗೂ ಮೂರು ಕೃಷಿ ಕಾನೂನು ವಿರೋಧಿಸಿ ರೈತರು ಪ್ರತಿಭಟನೆ ಶುರುಮಾಡಿ ಇಂದಿಗೆ ಒಂದು ವರ್ಷವಾಗುತ್ತಿದ್ದು, ಈ ವಿಚಾರವನ್ನು ಕೂಡ ಮೋದಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಸಂಜೆ ಸುಪ್ರೀಂಕೋರ್ಟ್ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ದಿನಾಚರಣೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ.