ಗುಂಟೂರು : ಆಂಧ್ರಪ್ರದೇಶದ ಬಾಬಾಪಟ್ಲಾ ಶಾಖೆಯ ಬ್ಯಾಂಕ್ ಆಫ್ ಬರೋಡಾ ಕಚೇರಿಯಲ್ಲಿ ಈ ಸುಮಾರು 5.8 ಕೆ.ಜಿ ಚಿನ್ನ ನಾಪತ್ತೆಯಾಗಿದೆ . ಬರೋಬ್ಬರಿ 2.65 ಕೋಟಿ ರೂಪಾಯಿ ಮೊತ್ತದ ಚಿನ್ನ ನಾಪತ್ತೆಯಾಗಿದೆ .
ಇದೇ ತಿಂಗಳು 2 ನೇಯ ತಾರೀಖಿನಂದು ಬ್ಯಾಂಕ್ ನಲ್ಲಿ ಆಡಿಟ್ ನಡೆದಿತ್ತು. ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ 5.8 ಕೆ.ಜಿ ಚಿನ್ನ ಕಾಣೆಯಾಗಿರುವುದು ಅರಿವಾಗಿದೆ . ಈ ಸಂಬಂಧ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು . ಸೆಪ್ಟೆಂಬರ್ 2ರಂದೇ ಕಚೇರಿಗೆ ನಾಗರಾಜು ಎಂಬ ಬ್ಯಾಂಕ್ ಸಿಬ್ಬಂದಿ ಕಚೇರಿಗೆ ಗೈರು ಹಾಜರಾಗಿದ್ದ.
ಅಂದಿನಿಂದ ಇಂದಿನವರೆಗೂ ಆತನ ಸುಳಿವು ಪತ್ತೆಯಾಗಿಲ್ಲ. ಪೊಲೀಸರು ಆತನಿಗೂ ಪ್ರಕರಣಕ್ಕೂ ಸಂಬಂಧ ಇರಬಹುದು ಎಂದು ಶಂಕಿಸಿದ್ದಾರೆ. ಹೀಗಾಗಿ ಆತನ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಆಡಿಟ್ ನಡೆಯುವ ಸಂದರ್ಭ ಆತ ಹೇಳದೇ ಕೇಳದೆ ಕಚೇರಿಯಿಂದ ಹೊರಬಿದ್ದಿದ್ದ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಕಳವು ಕೃತ್ಯ ಎಲ್ಲಿ ಹೊರಬರುವುದೋ ಎಂಬ ಭಯದಿಂದ ಆತ ಕಾಲ್ಕಿತ್ತಿರಬಹುದು ಎಂದು ಬ್ಯಾಂಕ್ ಅಧಿಕಾರಿಗಳು ಶಂಕಿಸಿದ್ದಾರೆ.
ಬ್ಯಾಂಕ್ ನಲ್ಲಿ ಚಿನ್ನ ಕಳವಾಗಿರುವ ಸುದ್ದಿ ಹೊರಬರುತ್ತಲೇ ಬ್ಯಾಂಕ್ ಗ್ರಾಹಕರು ಆತಂಕಕ್ಕೊಳಗಾಗಿ ಬ್ಯಾಂಕ್ ಬಳಿ ಜಮಾಯಿಸಿದ್ದರು. ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಅವರನ್ನು ಸಮಾಧಾನ ಪಡಿಸಿ ಅವರ ಚಿನ್ನದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ ಘಟನೆ ನಡೆದಿದೆ.