ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಕಚೇರಿ ಸಿಬ್ಬಂದಿ ಎಂಬುದಾಗಿ ಸುಳ್ಳು ಹೇಳಿಕೊಂಡು ರೆಮ್ಡಿಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ಆರೋಪದಡಿ ಚೇತನ್ (26) ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
‘ಅಗ್ರಹಾರ ದಾಸರಹಳ್ಳಿ ನಿವಾಸಿ ಚೇತನ್, ಸ್ಥಳೀಯ ವಾರ್ರೂಮ್ನಲ್ಲಿ ಕೆಲಸ ಮಾಡುತ್ತಿದ್ದ. ಸಂಸದ ತೇಜಸ್ವಿ ಸೂರ್ಯ ಹೆಸರು ಬಳಸಿಕೊಂಡು ಚುಚ್ಚುಮದ್ದು ಮಾರುತ್ತಿದ್ದ. ಈ ಬಗ್ಗೆ ಸಂಸದ ಕಚೇರಿಯ ಆಪ್ತ ಸಹಾಯಕ ಭಾನುಪ್ರಕಾಶ್ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು. ‘ಭಾನುಪ್ರಕಾಶ್ ಅವರ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿದ್ದ ಆರೋಪಿ ಚೇತನ್, ‘ನಾನು ತೇಜಸ್ವಿ ಸೂರ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕೋವಿಡ್ ರೋಗಿ ಚಿಕಿತ್ಸೆಗೆ ರೆಮ್ಡಿಸಿವಿರ್ ಚುಚ್ಚುಮದ್ದು ಅಗತ್ಯವಿದೆ. ₹ 10,000 ಕೊಟ್ಟರೆ ಚುಚ್ಚುಮದ್ದು ವ್ಯವಸ್ಥೆ ಮಾಡುತ್ತೇನೆ’ ಎಂದಿದ್ದ.
‘ವಿಷಯ ತಿಳಿದ ಭಾನುಪ್ರಕಾಶ್ ಸಹ ಆರೋಪಿಗೆ ಕರೆ ಮಾಡಿ ಮಾತನಾಡಿದ್ದರು. ಅವರ ಬಳಿಯೂ ಆರೋಪಿ, ಸಂಸದರ ಕಚೇರಿ ಸಿಬ್ಬಂದಿ ಎಂದೇ ಮಾತನಾಡಿದ್ದ. ಹೆಸರು ಕೇಳಿದಾಗ, ಶಿವಲಿಂಗಯ್ಯ ಎಂದಿದ್ದ’ ಎಂದೂ ಪೊಲೀಸರು ತಿಳಿಸಿದರು. ‘ಸಂಸದ ತೇಜಸ್ವಿ ಸೂರ್ಯ ಹೆಸರು ಹಾಳು ಮಾಡುವುದು ಹಾಗೂ ಅವರ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸಿ ಹಣ ಸಂಪಾದಿಸುವುದು ಆರೋಪಿ ಉದ್ದೇಶವಾಗಿತ್ತು ಎಂದು ಭಾನುಪ್ರಕಾಶ್ ದೂರಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದೂ ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಅವರ ನಕಲಿ ಪಿಏ ಬಂಧನ ; ಚುಚ್ಚುಮದ್ದಿನಲ್ಲಿ ವಂಚನೆ ಯತ್ನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.