ಕಾಬೂಲ್, ;ಆಫ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿದ ಐದನೇ ದಿನದಲ್ಲಿ ತನ್ನ ವರಸೆ ಬದಲಾಯಿಸಿರುವ ತಾಲಿಬಾನ್, ತನ್ನ ವಿರೋಧಿಗಳ ಪ್ರತೀಕಾರಕ್ಕೆ ಹೆಜ್ಜೆಯನ್ನಿಟ್ಟಿದ್ದು, ಮಹಿಳೆಯರ ಮೇಲೂ ಹಲವು ನಿರ್ಬಂಧಗಳನ್ನು ಹೇರಿದ್ದು, ಭಯಭೀತಿಗೆ ಒಳಗಾಗಿರುವ ಜನ ಪ್ರಾಣ ರಕ್ಷಿಸಿಕೊಳ್ಳಲು ಹೆಣಗಾಡುವಂತಾಗಿದೆ.
ವಿರೋಧಿಗಳ ವಿರುದ್ಧ ಪ್ರತೀಕಾರಕ್ಕೆ ಮುಂದಾಗುವುದಿಲ್ಲ ಎನ್ನುತ್ತಲೇ ತಮ್ಮ ವಿರುದ್ಧ ಅಮೆರಿಕ ಮತ್ತು ನ್ಯಾಟೋ ಪಡೆಗಳ ಜೊತೆ ಕೆಲಸ ಮಾಡಿದ್ದ ಜನರ ಹಾಗೂ ಭಾರತದ ರಾಯಭಾರಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಭಾರತೀಯರ ಹುಡುಕಾಟವನ್ನು ತಾಲಿಬಾನ್ ತೀವ್ರಗೊಳಿಸುತ್ತಿದೆ ಎಂದು ವಿಶ್ವಸಂಸ್ಥೆಯ ಗೌಪ್ಯ ದಾಖಲೆ ಬಹಿರಂಗಗೊಳಿಸಿದೆ.ಕೆಲ ದಾಖಲೆ ಪ್ರಕಾರ, ಆಫ್ಘಾನ್ ಮಿಲಿಟರಿ, ಪೊಲೀಸ್ ಮತ್ತು ಗುಪ್ತಚರ ಘಟಕಗಳ ಕೇಂದ್ರಸ್ಥಾನದಲ್ಲಿ ಕೆಲಸ ಮಾಡಿದವರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ತಿಳಿದುಬಂದಿದೆ. ತಾಲಿಬಾನ್ ಉಗ್ರರು ತಾವು ಬಂಧಿಸಲು ಬಯಸುವ ವ್ಯಕ್ತಿಗಳು ಮತ್ತು ಅವರ ಕುಟುಂಬ ಸದಸ್ಯರ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ.ಜತೆಗೆ ಕಾಬೂಲ್ ವಿಮಾನ ನಿಲ್ದಾಣದ ದಾರಿಯಲ್ಲಿ ಉಗ್ರರು ವ್ಯಕ್ತಿಗಳನ್ನು ಪರೀಕ್ಷಿಸುತ್ತಿದ್ದಾರೆ.ರಾಜಧಾನಿ ಕಾಬೂಲ್ ಮತ್ತು ಜಲಾಲಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿದ್ದಾರೆ ಎಂದೂ ಗುಪ್ತಚರ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಾಹಿತಿ ನೀಡಲು ನಿರಾಕರಿಸುವ ಕುಟುಂಬಗಳನ್ನು ಶರಿಯಾ ಕಾನೂನಿನ ಪ್ರಕಾರ ವಿಚಾರಣೆಗೆ ಒಳಪಡಿಸುತ್ತಾರೆ ಮತ್ತು ಶಿಕ್ಷಿಸುತ್ತಿದ್ದಾರೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕ್ರಿಶ್ಚಿಯನ್ ನೆಲ್ಲೆಮನ್ ಎಎಫ್ಪಿಗೆ ತಿಳಿಸಿದರು. ಆಫ್ಘಾನ್ನಲ್ಲಿ ಆಂತರಿಕ ಸಂಘರ್ಷ ಸೃಷ್ಟಿಯಾಗಿದ್ದು, ನಗರದಾದ್ಯಂತ ಇದ್ದ ಮಹಿಳೆಯರ ಸೌಂದರ್ಯವರ್ಧಕಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ಶುರುವಾಗಿದೆ.ಕಟ್ಟಾ ಸಂಪ್ರದಾಯವಾದಿಗಳಾದ ತಾಲಿಬಾನಿಗಳ ಆಡಳಿತದಲ್ಲಿ ಇಂಥ ಪೋಸ್ಟರ್ಗಳಿಗೆ, ಅವಕಾಶವಿರುವುದಿಲ್ಲ. ಹಾಗಾಗಿ, ಅಂಥ ಪೋಸ್ಟರ್ಗಳ ಮೇಲೆ ಬಿಳಿಸುಣ್ಣ ಬಳಿಯುವ ಮೂಲಕ ಅವುಗಳನ್ನು ಮರೆಮಾಚಲಾಗುತ್ತಿದೆ.
ಇನ್ನೂ ಕೆಲವಡೆ ಆ ಮಹಿಳೆಯರ ಭಾವಚಿತ್ರಗಳಿರುವ ಜಾಹೀರಾತು ಫಲಕಗಳನ್ನು ಧ್ವಂಸ ಮಾಡಲಾಗುತ್ತಿದೆ. ತಾಲಿಬಾನ್ನ ನಾಯಕ ಹಿಬತುಲ್ಲಾ ಅಖುಂಡಜಾದ, ಅಫ್ಘಾನಿಸ್ತಾನದ ಎಲ್ಲಾ ಜೈಲುಗಳಿಂದ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ ಎಂದು ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.
ಅಧಿಕಾರ ಹಿಡಿದ ಐದೇ ದಿನದಲ್ಲಿ ತನ್ನ ಕರಾಳ ಮುಖ ತೋರಿಸಲಾರಂಭಿಸಿರುವ ತಾಲಿಬಾನ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.