ಬೆಂಗಳೂರು, ;ಖಾತೆಗಾಗಿ ಕ್ಯಾತೆ ತೆಗೆದು ಮುನಿಸಿಕೊಂಡಿರುವ ಆನಂದ್ಸಿಂಗ್ರವರನ್ನು ಸಮಾಧಾನಗೊಳಿಸಿ ಖಾತೆ ಕ್ಯಾತೆಗೆ ತೆರೆ ಎಳೆಯುವ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನು ೩-೪ ದಿನದಲ್ಲಿ ದೆಹಲಿಗೆ ತೆರಳಲಿದ್ದಾರೆ.
ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಸಂಬಂಧ ಚರ್ಚೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವರುಗಳ ಭೇಟಿಗೆ ಸಮಯ ಕೇಳಿದ್ದು, ಸಮಯಾವಕಾಶ ಸಿಕ್ಕರೆ ತಕ್ಷಣವೆ ದೆಹಲಿಗೆ ಪಯಣ ಬೆಳಸಲಿದ್ದಾರೆ.ದೆಹಲಿಗೆ ತೆರಳಿದ ಸಂದರ್ಭದಲ್ಲಿ ಖಾತೆ ಹಂಚಿಕೆಯಿಂದ ಮುನಿಸಿಕೊಂಡಿರುವ ಸಚಿವ ಆನಂದ್ಸಿಂಗ್ ವಿಚಾರದ ಬಗ್ಗೆಯೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ವರಿಷ್ಠರೊಂದಿಗೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.
ಸಚಿವ ಆನಂದ್ಸಿಂಗ್ ತಮಗೆ ಈಗ ನೀಡಿರುವ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಬೇಡ ಎಂದು ಹೇಳಿ ಆ ಖಾತೆಯ ಜವಾಬ್ದಾರಿಯನ್ನು ಇನ್ನೂ ವಹಿಸಿಕೊಂಡಿಲ್ಲ. ಹಾಗೆಯೇ ಯಾರ ಕೈಗೂ ಸಿಗದೆ ಜ್ಞಾತ ವಾಸಿಯಾಗಿದ್ದಾರೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಗೂ ಆನಂದ್ಸಿಂಗ್ ಗೈರು ಹಾಜರಾಗಿದ್ದರು.ಈ ಎಲ್ಲ ಬೆಳವಣಿಗೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಸ್ವಲ್ಪಮಟ್ಟಿಗೆ ಮುಜುಗರ ತಂದಿದ್ದು, ಇದಕ್ಕೆಲ್ಲ ಅಂತ್ಯ ಹಾಡಲು ವರಿಷ್ಠರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ. ದೆಹಲಿ ಭೇಟಿ ಬಗ್ಗೆ ಗುಟ್ಟುಬಿಟ್ಟುಕೊಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಇನ್ನು ೨-೩ ದಿನಗಳಲ್ಲಿ ದೆಹಲಿಗೆ ತೆರಳುತ್ತೇನೆ ಎಂದಷ್ಟೇ ಹೇಳಿದರು. ವಿಧಾನಸೌಧದಲ್ಲಿಂದು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರ ಜನ್ಮದಿನದ ಅಂಗವಾಗಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಸೇರಿದಂತೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದೇನೆ. ಭೇಟಿ ನಿಗದಿಯಾದ ತಕ್ಷಣವೇ ದೆಹಲಿಗೆ ಹೋಗುತ್ತೇನೆ. ೨-೩ ದಿನಗಳಲ್ಲಿ ಕೆಂದ್ರ ಸಚಿವರ ಭೇಟಿಗೆ ತೆರಳಬಹುದು ಎಂದಷ್ಟೇ ಹೇಳಿ ಬೇರೆ ಯಾವುದೇ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.
ಖಾತೆ ಹಂಚಿಕೆ ಕುರಿತ ಭಿನ್ನಮತ ಶಮನಕ್ಕೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.