ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನವನ್ನು ಜೋಡಣೆ ಕಾರ್ಯವು ಅ.9 ರ ಇಂದು ಸಂಪ್ರದಾಯದಂತೆ ಜರುಗಲಿದೆ.
ಮೊದಲು ಸಿಂಹಾಸನದ ಬಿಡಿ ಭಾಗಗಳನ್ನು ಖಜಾನೆಯಿಂದ ಹೊರ ತೆಗೆದು ಪೂಜೆ ಸಲ್ಲಿಸಿ, ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಮರದ ಕಾಲಾವಧಿ ಕಟ್ಟಿ ಅದರ ಆಧಾರದ ಮೇಲೆ ನಿಂತು ಸಿಂಹಾಸನವನ್ನು ಖಾಸಗಿ ದರ್ಬಾರ್ ಹಾಲ್ ನಲ್ಲಿ ಜೋಡಿಸಲಾಗುತ್ತದೆ.
ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ನಡೆಯಲಿದ್ದು, ಇಂದು ಮುಂಜಾನೆಯಿಂದಲೇ ನವಗ್ರಹ, ಗಣಪತಿ ಹೋಮ-ಹವನ ನೆರವೇರುತ್ತಿದೆ.
ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನ ಸಂಪ್ರದಾಯದಂತೆ ಮೈಸೂರು ತಾಲೂಕಿನ ಗೆಜ್ಜಗಳ್ಳಿ ಗ್ರಾಮದ ವೀರಶೈವರು ಮಡಿ ಬಟ್ಟೆತೊಟ್ಟು ದೇವರಿಗೆ ಕೈಮುಗಿದು, ಸಿಂಹಾಸನದ 6 ಭಾಗಗಳನ್ನು ತಂದು ಅಂಬಾವಿಲಾಸ ರತ್ನಗಂಬಳಿಯ ಮೇಲೆ 15 ಅಡಿ ಅಗಲ ಮತ್ತು ಉದ್ದವಿರುವ ಜಾಗದಲ್ಲಿ ಕೂರ್ಮಾವತಾರ ಆಸನವನ್ನು ಜೋಡಿಸಿ, ಕಾಲುಗಳನ್ನು ಅಳವಡಿಸುವರು. ನಂತರ ಪುರೋಹಿತರು ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಬಿಳಿ ಬಟ್ಟೆಯಿಂದ ಮುಚ್ಚುತ್ತಾರೆ.
ಹಿಂದಿನ ಕಾಲದಲ್ಲಿ ಪ್ರತಿನಿತ್ಯವೂ ಮಹಾರಾಜರು ಸಿಂಹಾಸನವೇರಿ ದರ್ಬಾರ್ ನಡೆಸುತ್ತಿದ್ದರಾದರೂ, ನವರಾತ್ರಿ ವೇಳೆ ನಡೆಯುತ್ತಿದ್ದ ದರ್ಬಾರ್ಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಸ್ವಾತಂತ್ರ್ಯದ ನಂತರ ನವರಾತ್ರಿ ಸಮಯದಲ್ಲಿ ಖಾಸಗಿಯಾಗಿ ಹಿಂದಿನ ಧಾರ್ಮಿಕ ಕೈಂಕರ್ಯದೊಂದಿಗೆ ದರ್ಬಾರ್ ನಡೆಸಲಾಗುತ್ತಿದ್ದು, ಇದು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿದೆ.
ಈ ಸಿಂಹಾಸನವು ಚಿನ್ನದ ಬಾಳೆಯ ಕಂಬ & ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದ್ದು, ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನೇರುವ ಎರಡು ಬದಿಯಲ್ಲೂ ಸ್ತ್ರೀ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಇನ್ನು ಸಿಂಹಾಸನದಲ್ಲಿರುವ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಆಶೀರ್ವಾದ ಪೂರ್ವಕ ಶ್ಲೋಕಗಳಿವೆ.