ಮೈಸೂರು: ಹೈಕಮಾಂಡ್ ಸೂಚಿಸಿದ್ದರಿಂದ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಂದೆ. ನನ್ನ ಸೋಲಿಗೆ ಯಾರು ಕಾರಣರೆಂದು ಈಗ ಹೇಳುವುದಿಲ್ಲ. ಮುಂದೊಂದು ದಿನ ಅದು ಹೊರಗೆ ಬರುತ್ತದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದ ಏಳುಬೀಳು ನೆನೆದರು. ತಮ ಸೋಲಿಗೆ ಕಾರಣರಾದವರ ಬಗ್ಗೆ ಮಾರ್ಮಿಕವಾಗಿ ಟೀಕಿಸಿದರು. ರಾಜ್ಯದಲ್ಲಿಯೇ ಅತ್ಯಂತ ಎತ್ತರಕ್ಕೆ ಬೆಳೆದಿರುವ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಅನಿರೀಕ್ಷಿತವಾಗಿ ವರುಣಕ್ಕೆ ಬಂದೆ. ಪಕ್ಷದ ಆದೇಶ ಪಾಲಿಸಿದೆ. ನಾಯಕರು ಹೇಳಿದ್ದನ್ನು ಪ್ರಶ್ನಿಸಿದೇ ಸ್ವೀಕರಿಸಿದೆ ಎಂದರು.
ವರುಣ ಕ್ಷೇತ್ರದಲ್ಲಿ ಎಲ್ಲಾ ಮುಖಂಡರು ಕಾರ್ಯಕರ್ತರು ಬೆಂಬಲ ನೀಡಿದರು. ನನ್ನ ಸೋಲಿಗೆ ಎರಡು ಮೂರನೇ ಹಂತದ ನಾಯಕರು ಕಾರಣವಲ್ಲ. ಅದಕ್ಕೂ ಮೇಲಿನವರು ಏನು ಮಾಡಿದ್ದಾರೆ ಎಂದು ಅವರಿಗೇ ಗೊತ್ತು. ಚಾಮುಂಡೇಶ್ವರಿ ತಾಯಿಯೇ ನನ್ನ ವಿರುದ್ಧದ ಅಪಪ್ರಚಾರ ನೋಡಿಕೊಳ್ಳುತ್ತಾಳೆ ಎಂದು ಹೇಳಿದರು.
ರಾಜಕೀಯ ನಿಂತ ನೀರಲ್ಲ, ಸದಾ ಹರಿಯುವ ನೀರು. ನಾನು ದೇವೇಗೌಡರ ಗರಡಿಯಲ್ಲಿ ಬೆಳೆದಿದ್ದೇನೆ. ಜೆ.ಎಚ್.ಪಟೇಲ್ ಅವರ ಜೊತೆಯಲ್ಲಿ ಬೆಳೆದವನು. ಬಿಜೆಪಿಗೆ ಬಂದಾಗ ಯಡಿಯೂರಪ್ಪ ಅವರು ಏನೆಲ್ಲಾ ಕೆಲಸ ಮಾಡಬೇಕೆಂದು ಹೇಳಿಕೊಟ್ಟರು. ನನಗೆ ಪಕ್ಷವೇ ದೇವರು, ಪಕ್ಷವೇ ತಾಯಿ. ಆದರೆ, ನನಗೆ ಸಿಟ್ಟು ಬಂದರೆ ಪಕ್ಷವೂ ಬೇಡ ಎಂದು ಹೋಗುತ್ತಿರುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್.ಎಂ.ಕೃಷ್ಣ ಅವರ ವಿರುದ್ಧ ಜಗಳವಾಡಿಕೊಂಡು ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದೆ. ನಾನು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ. ನನಗಿಂತ ದೊಡ್ಡವನು ತಪ್ಪು ಮಾಡಿದ್ದರೂ ತಪ್ಪೆಂದು ಹೇಳುತ್ತೇನೆ. ವರುಣದಲ್ಲಿ ಯಾರಿಗಾದರೂ ತೊಂದರೆ ಕೊಟ್ಟರೆ ಸೋಮಣ್ಣ ಇದ್ದಾನೆ. ಚಿಂತಿಸಬೇಕಿಲ್ಲ ಎಂದು ಧೈರ್ಯ ತುಂಬಿದರು.
ಬೆಂಗಳೂರಿನಲ್ಲಿ ನನ್ನದೇ ಆದ ಕೋಟೆ ಕಟ್ಟಿದ್ದೇನೆ. ನಾನು ನನ್ನ ದುಡಿಮೆಯಲ್ಲಿ ಬೆಳೆದಿದ್ದೇನೆ. ಹೈಕಮಾಂಡ್ ಯಾಕೇ ನನ್ನ ಇಲ್ಲಿಗೆ ಕರೆಸಿದ್ದರೋ ಗೊತ್ತಿಲ್ಲ. ಚಿನ್ನದಂತಹ ನನ್ನ ಕ್ಷೇತ್ರದ ಜನ ಬೀದಿಯಲ್ಲಿ ಅನಾಥರಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಅಂಗವಿಕಲರಿಗೆ ಮಾಡಿದ್ಧ ಜಿಮ್ಗೆ ಬೀಗ ಹಾಕಿದ್ದಾರೆ ಎಂದರು.
ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಹೋದೆ. ನನ್ನ ಸೋದರ ಮಾವ ನಿಜಲಿಂಗಪ್ಪನ ಅಳಿಯ. ನಾನು ನನ್ನ ಅಮ್ಮ ಮಾವನ ಮನೆಗೆ ಹೋದಾಗ ಇವನನ್ನು ಯಾಕೆ ಕರೆದುಕೊಂಡು ಬಂದೆ ಎಂದು ಬೈದರು. ನಮ್ಮಮ್ಮ ನನಗೆ 25ರೂ. ನೀಡಿ ಇವನ ಮನೆಗೆ ಇನ್ಯಾವತ್ತೂ ಹೋಗಬೇಡ. ನಿಮಪ್ಪನ ಹೆಸರು ಉಳಿಸಿ ಬೆಳೆಯಬೇಕು ಎಂದರು. ನಾನು ಸಚಿವನಾದ ಮೇಲೆ ನಮ್ಮ ಮಾವ ನನ್ನ ಮನೆಗೆ ಬಂದರು. ಒಳ್ಳೆಯವರಿಗೆ ಯಾರು ಅನ್ಯಾಯ ಮಾಡಬೇಡಿ ಎಂದು ತಮ್ಮ ರಾಜಕೀಯ ಜೀವನ ಮೆಲುಕು ಹಾಕಿದರು.
ಅಶೋಕ ಮನೆಗೆ ಬಂದು ನನ್ನ ತರ ನಿಲ್ಲಬೇಕು ಎಂದ. ನಾನು ಅಶೋಕ ಅಲ್ಲ, ಸೋಮಣ್ಣ ಎಂದೆ. ಪ್ರವಾಹದ ವಿರುದ್ಧ ಈಜಲು ಪಕ್ಷ ಹೇಳಿದೆ, ಅದಕ್ಕೇ ನಿಂತೆ ಅಂದೆ. ಎಲ್ಲರೂ ಪಕ್ಷ ಸಂಘಟಿಸಬೇಕು. ಪಕ್ಷ ಹೇಳಿದ ಮಾತು ಕೇಳಬೇಕು. ಜಾತಿ ನೋಡದೇ ನಾಯಕರನ್ನು ಬೆಳೆಸಬೇಕು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಟರಾದ ಶಿವರಾಜಕುಮಾರ್, ಲೂಸ್ ಮಾದ, ದುನಿಯಾ ವಿಜಯ್ ಕರೆತಂದರು. ಸಿದ್ದರಾಮಯ್ಯ ಅವರ ಇಡೀ ಜೀವನದಲ್ಲಿ ಖರ್ಚು ಮಾಡದಷ್ಟು ಹಣವನ್ನು ಈ ಬಾರಿಯ ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯಗೆ ಯಾರು ಯಾರು ಫಂಡ್ ಮಾಡಿದ್ದಾರೆ ಎಂದು ಗೊತ್ತು. ನಾನು ದಡ್ಡನಲ್ಲ, ದಡ್ಡನ ತರಹ ನಡೆದುಕೊಳ್ಳುವ ಬುದ್ಧಿವಂತ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಮುಖಂಡರಾದ ಮೈ.ವಿ.ರವಿಶಂಕರ್, ಎಸ್.ಮಹದೇವಯ್ಯ, ಕೋಟೆ ಎಂ.ಶಿವಣ್ಣ, ಕಲ್ಲಳ್ಳಿ ವಿಜಯಕುಮಾರ್ ಭಾಗವಹಿಸಿದ್ದರು