ಮೈಸೂರು: ವಿಶ್ವ ವಿಖ್ಯಾತವಾಗಿರುವ ಮೈಸೂರಿನ ಅರಮನೆಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಆದರೆ ಇದೀಗ ದಸರಾ ಸಮಯವಾಗಿರುವುದರಿಂದ ಪ್ರವಾಸಿಗರ ಸಂಖ್ಯೆ ಇಮ್ಮಡಿಯಾಗುವ ಸಾಧ್ಯತೆ ಇರುತ್ತದೆ. ಆದರೆ ದಸರಾ ಹಿನ್ನಲೆಯಲ್ಲಿ ಕೆಲವೊಂದು ಕಾರ್ಯಕ್ರಮಗಳು ಅರಮನೆಯಲ್ಲಿ ಜರುಗುವುದರಿಂದ ಅಂತಹ ದಿನಗಳಲ್ಲಿ ಅರಮನೆಗೆ ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ.
ಹಾಗಾದರೆ ಅರಮನೆಗೆ ಪ್ರವಾಸಿಗರಿಗೆ ಯಾವ ದಿನಗಳಂದು ಪ್ರವೇಶವಿರುವುದಿಲ್ಲ ಎಂಬುದನ್ನು ನೋಡುವುದಾದರೆ ಸೆ. 20 ರಿಂದ ಅ. 20 ನಡುವೆ ವಿವಿಧ ಕಾರಣಕ್ಕೆ ಸುಮಾರು ಐದು ದಿನಗಳ ಕಾಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ನವರಾತ್ರಿ ವೇಳೆ ರಾಜವಂಶಸ್ಥರು ನಡೆಸುವ ಧಾರ್ಮಿಕ ಕೈಂಕರ್ಯಗಳ ಮಾಹಿತಿಯನ್ನು ಮೈಸೂರು ಅರಮನೆ ಮಂಡಳಿ ಬಿಡುಗಡೆ ಮಾಡಿದ್ದು ಆ ದಿನಗಳಂದು ಪ್ರವೇಶ ನಿಷೇಧಿಸಲಾಗುತ್ತದೆ.
ಎಂದಿನಂತೆ ನವರಾತ್ರಿಗೆ ಒಂಬತ್ತು ದಿನಗಳ ಕಾಲ ಅರಮನೆ ದರ್ಬಾರ್ ಹಾಲ್ ನಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಈ ದರ್ಬಾರ್ ಗೆ ರತ್ನ ಖಚಿತ ಸಿಂಹಾಸನದ ಜೋಡಣೆಯಾಗಬೇಕಿದೆ. ಈ ಕಾರ್ಯವು ಸೆ.20ರಂದು ನಡೆಯಲಿದೆ ಹೀಗಾಗಿ ಅಂದು ಬೆಳಿಗ್ಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಪ್ರವೇಶ ಇರುವುದಿಲ್ಲ. ಸೆ.26ರಂದು ಖಾಸಗಿ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥರ ಖಾಸಗಿ ಪೂಜಾ ಕೈಂಕರ್ಯದ ಪ್ರಯುಕ್ತ ಮಧ್ಯಾಹ್ನ 1.30ರ ತನಕ ಪ್ರವೇಶ ಇರುವುದಿಲ್ಲ.
ಅ.4ರಂದು ಆಯುಧ ಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ 2ರ ತನಕ ಪ್ರವೇಶ ಇರುವುದಿಲ್ಲ. ಅ.5ರ ವಿಜಯದಶಮಿ ಪ್ರಯುಕ್ತ ಸಂಪೂರ್ಣ ದಿನ ಪ್ರವೇಶವಿರುವುದಿಲ್ಲ. ಅ.20ರಂದು ಸಿಂಹಾಸನ ವಿಸರ್ಜನೆ ಪ್ರಯುಕ್ತ ಮಧ್ಯಾಹ್ನ 1ರ ತನಕ ನಿಷೇಧವಿರುತ್ತದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ಈ ಬಗ್ಗೆ ಗಮನಹರಿಸುವುದು ಉತ್ತಮ.