ಮೈಸೂರು: ತಾಯಿ ಹುಟ್ಟಿನಿಂದಲೇ ಮಗುವಿಗೆ ಮಾನವೀಯ ಚೈತನ್ಯವನ್ನು ತುಂಬುತ್ತಾಳೆ. ಭೂಮಿಯಿರುವುದರಿಂದಲೇ ಮನುಷ್ಯನ ಹುಟ್ಟು ಸಾಧ್ಯವಾಗಿದೆ. ಹುಟ್ಟು ಇಲ್ಲದಿದ್ದರೆ ಸಂಸ್ಕೃತಿಯೂ ಇರುತ್ತಿರಲಿಲ್ಲ ಎಂದು ಪ್ರಾಧ್ಯಾಪಕರಾದ ಡಾ.ಬಿ.ವಿ.ವಸಂತಕುಮಾರ್ ಹೇಳಿದರು.
ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಶ್ರಾವಣಮಾಸದ 11ನೇ ದಿನದ ಪ್ರವಚನದಲ್ಲಿ ಕರ್ನಾಟಕ ಸಂಸ್ಕೃತಿ ಎಂಬ ವಿಷಯ ಕುರಿತು ಮಾತನಾಡಿದ ಅವರು, ತಾಯಿ ಹುಟ್ಟಿನಿಂದಲೇ ಮಗುವಿಗೆ ಮಾನವೀಯ ಚೈತನ್ಯವನ್ನು ತುಂಬುತ್ತಾಳೆ. ಭೂಮಿಯಿರುವುದರಿಂದಲೇ ಮನುಷ್ಯನ ಹುಟ್ಟು ಸಾಧ್ಯವಾಗಿದೆ. ಹುಟ್ಟು ಇಲ್ಲದಿದ್ದರೆ ಸಂಸ್ಕೃತಿಯೂ ಇರುತ್ತಿರಲಿಲ್ಲ. ಭಾರತ ತಾಯಿಯಾದರೆ ಕರ್ನಾಟಕ ಅವಳ ಸುಪುತ್ರಿ ಎಂದು ಕುವೆಂಪುರವರು ಹೇಳಿದ್ದಾರೆ.
ಕರುನಾಡು, ಕಡುನಾಡು ಮತ್ತು ಕಮ್ಮಿತ್ತುನಾಡು ಎಂದು ಕರ್ನಾಟಕವನ್ನು ಕರೆಯಲಾಗುತ್ತಿತ್ತು. ಕಾವೇರಿಯಿಂದ ಗೋದಾವರಿವರೆಗೂ ಕನ್ನಡನಾಡು ಹಬ್ಬಿತ್ತು. ಕೆಲವು ಗ್ರಂಥಗಳಲ್ಲಿ ನರ್ಮದಾ ನದಿಯವರೆಗೂ ಕರ್ನಾಟಕದ ಗಡಿಯಿತ್ತು ಎಂಬ ಉಲ್ಲೇಖವಿದೆ. ವೇದೋಪನಿಷತ್ತುಗಳ ಕಾಲದಲ್ಲೇ ಕರ್ನಾಟಕದ ಕುರಿತಾಗಿ ಉಲ್ಲೇಖವಿದೆ. ಕನ್ನಡ ಭಾಷೆಯೂ ಸಹ ಅಷ್ಟೇ ಪ್ರಾಚೀನವಾದುದು. ಭೌಗೋಳಿಕ ಕರ್ನಾಟಕ ಗಡಿಗೆ ಮಾತ್ರ ಸೀಮಿತವಾದರೆ, ಸಾಂಸ್ಕೃತಿಕ ಕರ್ನಾಟಕ ಗಡಿಗಳನ್ನೂ ದಾಟಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಮೂಲಕ ವಿಸ್ತರಿಸಿದೆ ಎಂದರು.
ಇಂದಿನವರು ಸಂಸ್ಕೃತಿಯ ಬಗ್ಗೆ ಕೇವಲ ಮಾತನಾಡಲು ಮಾತ್ರ ಸಾಧ್ಯ, ಸೃಷ್ಟಿಸಲು ಸಾಧ್ಯವಿಲ್ಲ. ಆದರೆ ಜನಪದರು ಸಂಸ್ಕೃತಿಯನ್ನು ಸೃಷ್ಟಿಸಿದವರು. ಅವರು ರಾಗಿಯನ್ನು ಬೀಸುತ್ತಾ ಕಲ್ಲಿನ ಜೊತೆಗೂ ಮಾತನಾಡುತ್ತಾ ಗೀತೆಗಳನ್ನು ರಚಿಸಿದರು. ಇದು ಕನ್ನಡ ಸಂಸ್ಕೃತಿಯ ಸಾಮರ್ಥ್ಯ. ಶುಲ್ಕ ಕಟ್ಟಿ ಮಕ್ಕಳನ್ನು ಶಾಲೆಗೆ ಸೇರಿಸಿಬಿಟ್ಟರೆ ಸುಸಂಸ್ಕೃತರಾಗಲು ಸಾಧ್ಯವಿಲ್ಲ. ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು. ತಾಯಿ ಹೇಳಿಕೊಟ್ಟ ಪ್ರತಿಯೊಂದನ್ನು ಮಗು ಕಲಿಯುತ್ತದೆ. ಸಂಸ್ಕೃತಿ ಮನುಷ್ಯ ಹೇಗಿರಬೇಕೆಂದು ನಿರ್ದೇಶನ ಮಾಡುತ್ತದೆ. ಸಂಸ್ಕೃತಿ ಎನ್ನುವುದು ಮರದ ಬೇರಿನಂತೆ, ಅದಕ್ಕೆ ನೀರೆರಾದಗ ಮಾತ್ರ ಸೋಂಪಾದ ಹೂ-ಹಣ್ಣುಗಳನ್ನು ಬೆಳೆಯಲು ಸಾಧ್ಯ. ಸಂಸ್ಕೃತಿ ಹೂವಿನ ಪರಿಮಳದಂತೆ ಹೂವು ಬಾಡಿದರೂ ಪರಿಮಳ ನಾಶವಾಗುವುದಿಲ್ಲ. ಪ್ರೀತಿಯೇ ಸಂಸ್ಕೃತಿಯ ಮೂಲ. ದ್ವೇಷದಿಂದ ವಿನಾಶವಾದರೆ, ಪ್ರೀತಿಯಿಂದ ಮಾತ್ರ ಸೃಷ್ಟಿ ಸಾಧ್ಯ ಎಂದು ತಿಳಿಸಿದರು.
ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀ ಬಿ.ಎಚ್. ರೇವಣಿಪ್ರಸಾದ್ರವರು ಸೇವಾರ್ಥ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಕ್ತಾದಿಗಳು ಹಾಗೂ ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.