ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಕಪಿಲಾ ನದಿ ಸೇತುವೆಯು ಶಿಥಿಲಗೊಂಡಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ದುರಸ್ಥಿ ಕಾಮಗಾರಿ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಹುಲ್ಲಹಳ್ಳಿ – ಮೈಸೂರು ಮುಖ್ಯ ರಸ್ತೆಯಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ಇಂದಿನಿಂದ ಒಂದು ತಿಂಗಳ ಕಾಲ ಬಂದ್ ಮಾಡಿ, ವಾಹನ ಸಂಚಾರವನ್ನು ಸ್ಥಗಿತ ಮಾಡಲಾಗಿದೆ.
ಕಪಿಲಾ ನದಿ ಸೇತುವೆಯು ವರ್ಷಗಳಿಂದ ಶಿಥಿಲಗೊಂಡು, ಹಳ್ಳ ಕೊಳ್ಳಗಳಿಂದ ಕೂಡಿದ್ದು ಇಂದು ಲೋಕೋಪಯೋಗಿ ಇಲಾಖೆಯ ವತಿಯಿಂದ ಸೇತುವೆ ದುರಸ್ತಿ ಕಾರ್ಯ ನಡೆಯುತ್ತಿದೆ.
ಮೈಸೂರಿನಿಂದ ಹುಲ್ಲಹಳ್ಳಿಗೆ ಮತ್ತು ಹುಲ್ಲಹಳ್ಳಿಯಿಂದ ಮೈಸೂರಿಗೆ ಸಂಚರಿಸುವ ಎಲ್ಲಾ ವಾಹನಗಳಿಗೆ ನಿರ್ಭಂಧಿಸಲಾಗಿದೆ. ವಾಹನ ಸವಾರರು ಹುಲ್ಲಹಳ್ಳಿಯಿಂದ ಮೈಸೂರಿಗೆ ತೆರಳಬೇಕಾದರೆ ಪರ್ಯಾಯ ಮಾರ್ಗವಾಗಿ ನಂಜನಗೂಡು, ಕಡಕೋಳ ಮಾರ್ಗವಾಗಿ ತೆರಳಬಹುದಾಗಿದೆ.
ಪ್ರತಿ ನಿತ್ಯ ಹುಲ್ಲಹಳ್ಳಿ ಗ್ರಾಮಕ್ಕೆ ಬರುವ ಅಕ್ಕ ಪಕ್ಕದ ಗ್ರಾಮಗಳ ಸಾವಿರಾರು ಶಾಲಾ – ಕಾಲೇಜಿನ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಇದೇ ಸೇತುವೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಸೇತುವೆ ಕಾಮಗಾರಿ ಮುಗಿಯುವುದು ಎರಡು ಮೂರು ತಿಂಗಳು ಆಗುತ್ತದೆ ಅಲ್ಲಿಯ ತನಕ ವಿದ್ಯಾರ್ಥಿಗಳು, ಸಾರ್ವಜನಿಕರು ನಂಜನಗೂಡು ಮತ್ತು ಹೊಮ್ಮರಗಳ್ಳಿಯಿಂದ ಸುತ್ತಾಡಿಕೊಂಡು ಬರಲು ಸಾಧ್ಯವಿಲ್ಲ ಆದ್ದರಿಂದ ರಾಜ್ಯ ಸರ್ಕಾರ ಪರ್ಯಾಯ ಮಾರ್ಗವಾಗಿ ಕಪಿಲಾ ನದಿಯಲ್ಲಿ ಬೋಟ್ ಅಥವಾ ತೆಪ್ಪದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.