ಹಾಸನ: ಮಲೆನಾಡು ಭಾಗವಾದ ಸಕಲೇಶಪುರ ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಒಂಟಿ ಸಲಗ ಅಟ್ಟಾಡಿಸಿ ರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಕಲೇಶಪುರ ತಾಲೂಕಿನ ಕಿರೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರವೀಣ್ ಎಂಬಾತನನ್ನು ಒಂಟಿಸಲಗ ಕಾಫಿ ತೋಟದಲ್ಲಿ ಅಟ್ಟಾಡಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪ್ರವೀಣ್ ಸ್ವಲ್ಪ ಅಂತರದಲ್ಲಿ ಸಲಗದಿಂದ ಪಾರಾಗಿದ್ದಾರೆ.
ಅರಣ್ಯ ಇಲಾಖೆಯಿಂದ ಕಾಡಾನೆಗಳ ಚಲನವಲನವನ್ನು ಗಮನಿಸಲು ಸಿಬ್ಬಂದಿಗಳನ್ನು ನೇಮಿಸಿದ್ದು ಪ್ರವೀಣ್ ಅವರು ಕರ್ತವ್ಯದಲ್ಲಿ ಇದ್ದಾಗ ಇಂತಹ ಘಟನೆ ನಡೆದಿದೆ.
ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಕಾಡಾನೆಗಳ ಹಿಂಡು ಪದೇಪದೇ ಪ್ರತ್ಯಕ್ಷವಾಗುತ್ತಿದ್ದು ಕಾಫಿ ತೋಟದ ಮಾಲೀಕರು, ರೈತರು ಹಾಗೂ ಗ್ರಾಮಸ್ಥರು ತೀವ್ರ ಆತಂಕದ ದಿನಗಳನ್ನು ದೂಡುವಂತಾಗಿದೆ.
ಹಿಂಡಿನಲ್ಲಿ ಬರುವ ಆನೆಗಳನ್ನು ನಿಯಂತ್ರಿಸಲು ಆಗದೆ ಅರಣ್ಯ ಇಲಾಖೆ ಕೈಚೆಲ್ಲಿ ಕುಳಿತಿದ್ದರೆ. ತಮ್ಮ ಬೆಳೆಗಳನ್ನು ರಕ್ಷಿಸಿ ಕೊಳ್ಳಲು ಆಗದೆ ಪರಿತಪಿಸುತ್ತಿರುವ ಈ ಭಾಗದ ಕಾಫಿ ಬೆಳೆಗಾರರು ಹಾಗೂ ರೈತರು ಸರ್ಕಾರದಿಂದ ಸೂಕ್ತ ಸ್ಪಂದನೆಗೆ ಒತ್ತಾಯಿಸಿದ್ದಾರೆ.
ಹಲವು ವರ್ಷಗಳಿಂದಲೂ ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಉಲ್ಬಳಿಸುತ್ತಿದ್ದು ಕೇವಲ ಒಂದೆರಡು ಆನೆಗಳನ್ನು ಸೇರೆ ಹಿಡಿದು ದುಬಾರಿಗಳಿಗೆ ಬಿಡಲಾಗುತ್ತಿದೆ. ಆದರೆ ಇಂತಹ ಕ್ರಮಗಳಿಂದ ಕಾಡನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂತತಿಯು ಹೆಚ್ಚುತ್ತಿದ್ದು ಸಲಗದ ಹಾವಳಿಯು ಹೆಚ್ಚಿದೆ. ಕಾಡಾನೆ ದಾಳಿಯಿಂದ ಈಗಾಗಲೇ ೭೫ಕ್ಕು ಹೆಚ್ಚು ಮಂದಿಯ ಪ್ರಾಣ ಹಾನಿಯಾಗಿದ್ದು ನೂರಾರು ಎಕರೆ ಬೆಳೆ ನಾಶದೊಂದಿಗೆ ರೈತರು ಸಂಕಷ್ಟದ ದಿನಗಳನ್ನು ದೂಡುವಂತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳಿಂದ ಅಗುತ್ತಿರುವ ಸಮಸ್ಯೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಠಿಣ ನಿಲುವನ್ನು ತಾಳಬೇಕು ಎಂದು ಮಲೆನಾಡಿಗರು ಆಗ್ರಹಿಸಿದ್ದಾರೆ.