ಮೈಸೂರು: ಎಲ್ಲರೂ ಕಾತರದಿಂದ ಕಾಯುತ್ತಿದ್ದ ಮೈಸೂರು ದಸರಾದ ಅತ್ಯಾಕರ್ಷಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಅತ್ತ ನೆಟ್ಟಿದೆ.
ಕಳೆದ ಎರಡು ವರ್ಷಗಳಿಂದ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ಈ ಬಾರಿ ಹೊಸ ಅನುಭವ ಕಾರಣ ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಜಂಬೂಸವಾರಿ ಅರಮನೆ ಆವರಣದಲ್ಲಿ ನಡೆದಿತ್ತು. ಆದರೆ ಈ ಸಲ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು ಐದು ಕಿ.ಮೀ. ದೂರವನ್ನು ಕ್ರಮಿಸಬೇಕಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಸೇರಿದಂತೆ ಸುಮಾರು 950 ಕೆಜಿ ತೂಕವನ್ನು ಹೊತ್ತು ನಡೆಯಬೇಕಿದೆ. ಅದಕ್ಕಿಂತ ಹೆಚ್ಚಾಗಿ ಅಂಬಾರಿ ಹೊತ್ತು ಹೊರಡುವ ಮುಹೂರ್ತ ಸಂಜೆ 5ಗಂಟೆ ನಂತರ ಇರುವ ಕಾರಣ ಬನ್ನಿ ಮಂಟಪ ತಲುಪುವ ವೇಳೆಗೆ ರಾತ್ರಿಯಾಗಲಿದೆ. ಹೀಗಾಗಿ ವಿದ್ಯುದ್ದೀಪದ ಬೆಳಕಿನಲ್ಲಿ ಅಭಿಮನ್ಯು ಹೆಜ್ಜೆ ಹಾಕಬೇಕಾಗಿದೆ.
ಇದೆಲ್ಲದರ ನಡುವೆ ಅಂಬಾರಿ ಹೊರುವ ಅಭಿಮನ್ಯು ಆನೆಯ ಬಗ್ಗೆ ಹೇಳಲೇ ಬೇಕು. ಕೆಲವು ವರ್ಷಗಳ ಹಿಂದೆ ಜಂಬೂಸವಾರಿಯಲ್ಲಿ ಅಭಿಮನ್ಯು ಸಂಗೀತಗಾರರ ಗಾಡಿಯನ್ನು ಎಳೆಯುವ ಕಾರ್ಯವನ್ನು ಮಾಡುತ್ತಿದ್ದನು. ನಾಲ್ಕು ಚಕ್ರಗಳ ಛಾವಣಿ ಹೊಂದಿದ ಸುಂದರವಾದ ಬೃಹತ್ ಗಾಡಿಯಲ್ಲಿ ವಾದ್ಯಗಾರರು ನುಡಿಸುತ್ತಿದ್ದರೆ ಅವರನ್ನು ಎಳೆದುಕೊಂಡು ಜಂಬೂ ಸವಾರಿಯಲ್ಲಿ ಅರ್ಜುನ ಸಾಗುತ್ತಿದ್ದನು.
ಅಭಿಮನ್ಯು ಆನೆ ಒಂದು ಕಾಲದಲ್ಲಿ ಎಲ್ಲಾ ಆನೆಗಳಂತೆ ಕೊಡಗಿನ ಅರಣ್ಯದಲ್ಲಿ ಅಂಡಲೆಯುತ್ತಾ ಪುಂಡಾಟ ನಡೆಸುತ್ತಿತ್ತು. ಹೀಗಾಗಿ ಇದನ್ನು 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಪಳಗಿಸಿ ಅಭಿಮನ್ಯು ಎಂದು ನಾಮಕರಣ ಮಾಡಲಾಯಿತು.ಬಲಿಷ್ಠನಾಗಿರುವ ಈತನನ್ನು ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸಲು ಮತ್ತು ಚಿಕಿತ್ಸೆ ನೀಡಲು ಬಳಸಿಕೊಳ್ಳುತ್ತಾ ಬರಲಾಗುತ್ತಿದೆ.
57ವರ್ಷದ ಅಭಿಮನ್ಯುನದು ತಿತಿಮತಿಯ ಮತ್ತಿಗೋಡು ಆನೆಶಿಬಿರ ಖಾಯಂ ವಾಸಸ್ಥಾನ. 2.72 ಮೀ ಎತ್ತರ, 3.51 ಮೀ. ಉದ್ದ ಹಾಗೂ 5000 ಕೆಜಿ ತೂಕ ಹೊಂದಿದ್ದಾನೆ. ಈತ ಕಾಡಾನೆಗಳನ್ನು ಸೆರೆ ಹಿಡಿಯುವುದು, ಕಾಡಿಗೆ ಹಿಮ್ಮೆಟ್ಟಿಸುವುದರಲ್ಲಿ ನಿಸ್ಸೀಮ. ಈತನ ಮೇಲೆ ಮಾಗಡಿಯ ಸಾವನದುರ್ಗ ಅರಣ್ಯದಲ್ಲಿ ಎರಡು ಕಾಡಾನೆಗಳು ಮಾಡಿದರೂ ಧೃತಿಗೆಡದೆ ಅವುಗಳನ್ನು ಹಿಮ್ಮೆಟ್ಟಿಸಿದ ಧೈರ್ಯಶಾಲಿ ಅಷ್ಟೇ ಅಲ್ಲ ಬಲಶಾಲಿಯೂ ಹೌದು. ಮೈಸೂರು ದಸರಾ ಮಾತ್ರವಲ್ಲದೆ ಶ್ರೀರಂಗಪಟ್ಟಣದಲ್ಲಿ ಮೂರು ಬಾರಿ ಅಂಬಾರಿ ಹೊತ್ತಿದ್ದಾನೆ. ಇದುವರೆಗೆ ನೂರಕ್ಕೂ ಹೆಚ್ಚು ಕಾಡಾನೆ ಕಾರ್ಯಾಚರಣೆ ಮತ್ತು ಎಂಟಕ್ಕೂ ಹೆಚ್ಚು ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಅಭಿಮನ್ಯು ಚಾಣಾಕ್ಷನಾಗಿದ್ದಾನೆ.
ಈಗಾಗಲೇ ದಸರಾ ಜಂಬೂ ಸವಾರಿಗೆ ಸಂಬಂಧಿಸಿದ ಎಲ್ಲ ರೀತಿಯ ತಾಲೀಮನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ ಅಂಬಾರಿಯನ್ನು ಹೊರಲು ಸರ್ವ ರೀತಿಯಲ್ಲಿ ತಯಾರಾಗಿದ್ದಾನೆ. ಆತ ಅಂಬಾರಿ ಹೊತ್ತು ಗಜಗಾಂಭೀರ್ಯದಲ್ಲಿ ಹೆಜ್ಜೆ ಹಾಕುವುದನ್ನು ನೋಡಲು ಕಾಯುತ್ತಿದ್ದಾರೆ