ಮೈಸೂರು: ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (ಕೆಎಸ್ಐಸಿ) ಕಾರ್ಖಾನೆ ವತಿಯಿಂದ ನಡೆದ ತಿರಸ್ಕರಿಸಿದ ರೇಷ್ಮೆ ಸೀರೆಗಳ ಮೂರು ದಿನಗಳ ರಿಯಾಯಿತಿ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮೂರು ಸಾವಿರಕ್ಕೂ ಹೆಚ್ಚು ಸೀರೆಗಳು ಮಾರಾಟವಾಗಿದ್ದು. ಮಹಿಳೆಯರು ಮುಗಿಬಿದ್ದು ರೇಷ್ಮೆ ಸೀರೆ ಖರೀದಿಸಿದ್ದಾರೆ.
ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (ಕೆಎಸ್ ಐಸಿ) ಕಾರ್ಖಾನೆಯ ಶತಮಾನೋತ್ಸವ ಕಟ್ಟಡದಲ್ಲಿ ಮಾ.15ರಿಂದ 17ರವರೆಗೆ ತಿರಸ್ಕರಿಸಿದ ರೇಷ್ಮೆ ಸೀರೆಗಳ ಮೂರು ದಿನಗಳ ರಿಯಾಯಿತಿ ಮಾರಾಟ ಏರ್ಪಡಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಬೆಳಗ್ಗೆಯಿಂದಲೇ ನಗರದ ವಿವಿಧ ಭಾಗಗಳಿಂದ ಸಾವಿರಾರು ಮಹಿಳೆಯರು ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದ ರೇಷ್ಮೆ ಸೀರೆಯನ್ನು ಖರೀದಿಸಿ ಖುಷಿ ಪಟ್ಟಿದ್ದಾರೆ.
ಸಾಮಾನ್ಯವಾಗಿ ಮೈಸೂರು ರೇಷ್ಮೆ ಸೀರೆಯನ್ನು ಉಡಬೇಕೆನ್ನುವುದು ಹೆಚ್ಚಿನ ಮಹಿಳೆಯರ ಬಯಕೆಯಾಗಿರುತ್ತದೆ. ಆದರೆ ಬೆಲೆ ದುಬಾರಿಯಾಗಿರುವ ಕಾರಣದಿಂದ ಹಿಂದೇಟು ಹಾಕುತ್ತಾರೆ ಆದರೆ ಮೂರು ದಿನಗಳ ಕಾಲ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ನಡೆಯುತ್ತಿದ್ದ ಕಾರಣ ಸರತಿ ಸಾಲಿನಲ್ಲಿ ನಿಂತು ಸೀರೆಯನ್ನು ಖರೀದಿಸಿದ್ದು, ಸೀರೆಗಳೆಲ್ಲವೂ ಖಾಲಿಯಾಗಿದೆ.
ರಿಯಾಯಿತಿ ಮಾರಾಟದ ಕೊನೆ ದಿನವಾದ ಭಾನುವಾರ ರಜಾ ದಿನವಾದ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಸ್ಥಳಕ್ಕಾಗಮಿಸಿದ ಮಹಿಳೆಯರಿಂದ ಆವರಣ ತುಂಬಿ ತುಳುಕುತ್ತಿತ್ತು. ಬೆಳಗ್ಗೆ 10.30ಕ್ಕೆ ಗೇಟ್ಗಳು ತೆರೆದಾಗ ಮಹಿಳೆಯರು ಸ್ಥಳಕ್ಕೆ ಧಾವಿಸಿ ಗದ್ದಲ ಉಂಟು ಮಾಡಿದರು. ಈ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದವರು ಹರಸಾಹಸ ಪಟ್ಟರು.
ರಿಯಾಯಿತಿ ಮಾರಾಟಕ್ಕೆ ಝರಿ ಮತ್ತು ಝರಿ ರಹಿತವಾದ 3ಸಾವಿರ ಸೀರೆಗಳು ಬಂದಿದ್ದವು. ಝರಿ ಸೀರೆಗಳ ಬೆಲೆ 10 ಸಾವಿರದಿಂದ 2.5 ಲಕ್ಷಗಳವರೆಗೆ ಇದ್ದರೆ, ಝರಿಯೇತರ ಸೀರೆಗಳ ಬೆಲೆ 6 ಸಾವಿರದಿಂದ 10ಸಾವಿರದವರೆಗೆ ಇತ್ತು. ಈ ಬೆಲೆಗಳ ಅನುಗುಣವಾಗಿ ಶೇ.30ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು.
ಕೆಎಸ್ಐಸಿ ಪ್ರಧಾನ ವ್ಯವಸ್ಥಾಪಕ (ಮಾರಾಟ) ಭಾನು ಪ್ರಕಾಶ್ ಮಾತನಾಡಿ, ತಿರಸ್ಕರಿಸಿದ ಸೀರೆಗಳ ರಿಯಾಯಿತಿ ಮಾರಾಟವನ್ನು ಇಲ್ಲಿ ಮಾಡಲಾಗುತ್ತಿದೆ. ಏಕೆಂದರೆ ಅವುಗಳನ್ನು ಕೆಎಸ್ ಐಸಿ ಮಳಿಗೆಗಳಲ್ಲಿ ಮಾರಾಟ ಮಾಡುವುದರಿಂದ ಬ್ರ್ಯಾಂಡ್ ಮೌಲ್ಯಕ್ಕೆ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಈ ವೇಳೆ ಕೆಲವು ಮಹಿಳೆಯರು ಮಾತನಾಡಿ, ಸೀರೆಗಳು ಉತ್ತಮವಾಗಿವೆ. ಆದರೆ, ಮತ್ತಷ್ಟು ಸೂಕ್ತ ವ್ಯವಸ್ಥೆ ಕಲ್ಪಿಸಬಹುದಾಗಿತ್ತು. ಬಹಳಷ್ಟು ಮಂದಿ ಸೀರೆ ಸಿಗದೆ ವಾಪಸ್ಸು ಆಗಿದ್ದಾರೆ ಎಂದು ಹೇಳಿದ್ದಾರೆ.