ನಂಜನಗೂಡು : ಐದು ವರ್ಷಗಳ ನಂತರ ಗ್ರಾಮಕ್ಕೆ ಎಂಟ್ರಿ ಕೊಟ್ಟ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಗೆ ಗ್ರಾಮಸ್ಥರು ಬಿಸಿ ಮುಟ್ಟಿಸಿದ್ದಾರೆ. ಚುನಾವಣಾ ಪ್ರಚಾರದ ಮೊದಲ ದಿನವೇ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ದೇವನೂರು ಗ್ರಾಮದಲ್ಲಿ ಪ್ರಚಾರಕ್ಕೆ ಬಂದ ಶಾಸಕರಿಗೆ ಗ್ರಾಮಸ್ಥರ ಆಕ್ರೋಷ ಎದುರಿಸಬೇಕಾಗಿ ಬಂದಿದೆ. ಹರ್ಷವರ್ಧನ್ ನೆರವಿಗೆ ಬಂದ ಇತರ ಮುಖಂಡರಿಗೂ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.
ದೇವನೂರು ಗ್ರಾಮದ ಶ್ರೀ ಗುರುಮಲ್ಲೇಶ್ವರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ ಇಂದು ಶಾಸಕ ಹರ್ಷವರ್ಧನ್ ಪ್ರಚಾರ ಆರಂಭಿಸಿದರು.ಗ್ರಾಮದ 100ಕ್ಕೂ ಹೆಚ್ಚು ಯುವಕರು ಸುತ್ತುವರೆದು ಹಿಗ್ಗ ಮಗ್ಗ ತರಾಟೆಗೆ ತೆಗೆದುಕೊಂಡರು.
ನಿಮ್ಮ ಐದು ವರ್ಷಗಳ ಆಡಳಿತ ಅವಧಿಯಲ್ಲಿ ದೇವನೂರು ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ದೇವನೂರು ಗ್ರಾಮದ ಪ್ರಸಿದ್ಧ ಮತ್ತು ಪ್ರಖ್ಯಾತ ಮಠದ ಮುಂಭಾಗದಲ್ಲಿ ಕೇವಲ ಒಂದು ಬೀದಿ ದೀಪ ಸರಿಪಡಿಸಲು ನಿಮ್ಮ ಕೈಲಿ ಆಗಿಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕೂಡ ಕಲ್ಪಿಸಲು ಸಾಧ್ಯವಾಗಿಲ್ಲ.
ಅಂದಮೇಲೆ ನಮ್ಮ ಮತ ನಿಮಗೆ ಯಾಕೆ..? ನೀವು ನಮ್ಮನ್ನು ಯಾಕಾಗಿ ಮತ ಕೇಳುತ್ತೀರಿ..! ರಿ ಶಾಸಕರೇ ನಿಮ್ಮ ಶ್ವೇತಪತ್ರ ಯಾಕ್ರೀ ಬೇಕು..! ಐದು ವರ್ಷಗಳು ಕಳೆದ ಮೇಲೆ ನಿಮಗೆ ದೇವನೂರು ಗ್ರಾಮ ನೆನಪಿಗೆ ಬಂತೆ. ಕೇವಲ ದುರಸ್ತಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿ ನಿಮಗೆ ಬೇಕಾದವರ ಹೆಸರಿಗೆ ಹಾಕಿ ಈಗ ಅಭಿವೃದ್ಧಿ ಅಂತ ಹೆಸರೆಳುತ್ತೀರಿ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಯುವಕರು ಕೇಳಿದ ಅಭಿವೃದ್ಧಿಯ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಹರ್ಷಷವರ್ಧನ್ ತಬ್ಬಿಬಾದರು. ನಂತರ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಿದರು.