ಮೈಸೂರು: ಈಗಾಗಲೇ ಮೈಸೂರು ದಸರಾ ಅಂಗವಾಗಿ ಕುಸ್ತಿ ಪಂದ್ಯಾವಳಿ ನಡೆದಿದೆ. ಆದರೆ ಅ.5ರಂದು ಜಂಬೂಸವಾರಿ ನಡೆಯುವ ದಿನದಂದು ಅರಮನೆ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ನಡೆಯುತ್ತದೆ. ಆದರೆ ಇದು ಕುಸ್ತಿಯಂತೆ ಇದ್ದರೂ ಕುಸ್ತಿ ಅಲ್ಲ. ಇದನ್ನು ವಜ್ರಮುಷ್ಠಿ ಕಾಳಗ ಎಂದು ಕರೆಯಲಾಗುತ್ತದೆ.
ಇಷ್ಟಕ್ಕೂ ದಸರಾ ದಿನದಂದು ಜಂಬೂಸವಾರಿಗೆ ಮುನ್ನ ಮೈಸೂರು ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಠಿ ಕಾಳಗ ರಾಜರ ಕಾಲದಿಂದಲೂ ನಡೆದುಬಂದ ಸಂಪ್ರದಾಯವಾಗಿದೆ.
ಈ ಕಾಳಗದಲ್ಲಿ ಸೆಣಸಾಡುವ ಜಟ್ಟಿಗಳಿಗೆ ಮಹರಾಜರ ಆಸ್ಥಾನದಲ್ಲಿ ವಿಶೇಷ ಸ್ಥಾನಮಾನ ನೀಡಲಾಗುತ್ತಿತ್ತು. ಅಷ್ಟೇ ಅಲ್ಲದೆ ನವರಾತ್ರಿ ಸಂದರ್ಭ ವಜ್ರಮುಷ್ಠಿ ಕಾಳಗದ ಮೂಲಕ ದುರ್ಗಾ ಮಾತೆಗೆ ಶಾಂತಿ ಮಾಡಲಾಗುತ್ತಿತ್ತು ಅದು ಈಗಲೂ ಮುಂದುವರೆದಿದೆ. ಆದರೆ ಹಿಂದಿನ ಕಾಲದಲ್ಲಿ ವಜ್ರಮುಷ್ಠಿ ಕಾಳಗ ಮಾಡುತ್ತಿದ್ದ ಜಟ್ಟಿಗಳನ್ನು ಆಸ್ಥಾನದಲ್ಲಿರಿಸಿ ಕೊಳ್ಳಲಾಗುತ್ತಿತ್ತು. ಆದರೆ ಸ್ವಾತಂತ್ರ್ಯನಂತರ ಸರ್ಕಾರ ದಸರಾವನ್ನು ಆಚರಿಸಲು ಆರಂಭಿಸಿದ ಬಳಿಕ ವಜ್ರಮುಷ್ಠಿಯನ್ನು ಸಂಪ್ರದಾಯವಾಗಿ ದಸರಾ ಸಂದರ್ಭ ಅದರಲ್ಲೂ ಜಂಬೂಸವಾರಿ ದಿನದಂದು ನಡೆಸುತ್ತಾ ಬರಲಾಯಿತು.
ಈ ವಜ್ರಮುಷ್ಠಿ ಕಾಳಗಕ್ಕಾಗಿಯೇ ಜಟ್ಟಿ ಕಾಳಗದಲ್ಲಿ ಪಾಲ್ಗೊಳ್ಳುವ ಜಟ್ಟಿಗಳು ಆರು ತಿಂಗಳಿನಿಂದ ತಾಲೀಮು ನಡೆಸುವುದರೊಂದಿಗೆ ಕಟ್ಟುನಿಟ್ಟಿನ ವೃತವನ್ನು ಸುಮಾರು ಒಂಬತ್ತು ದಿನಗಳ ಕಾಲ ಮಾಡುವುದಲ್ಲದೆ, ಒಂದು ತಿಂಗಳ ಹಿಂದಿನಿಂದಲೇ ತಾಲೀಮು ನಡೆಸಿ ಸಿದ್ಧರಾಗುತ್ತಾರೆ.
ವಜ್ರಮುಷ್ಠಿಯಲ್ಲಿ ಪಾಲ್ಗೊಳ್ಳುವ ಫೈಲ್ವಾನ್ಗಳು ತಲೆಬೋಳಿಸಿ ದೃಢಕಾಯವಾಗಿರುವ ಅನುಭವಿ ವಸ್ತಾದ್ ತನ್ನ ಬಲಗೈಗೆ (ಆನೆದಂತ ಅಥವಾ ಸಾರಂಗದ ಕೊಂಬಿನಿಂದ ತಯಾರಿಸಿದ ಆಯುಧ) ವಜ್ರನಖವನ್ನು ಹಿಡಿದು ಎಡಗೈಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಇಂತಹ ನಾಲ್ವರು ಅಖಾಡದಲ್ಲಿ ಸೆಣೆಸಾಡುತ್ತಾರೆ. ತನ್ನ ಬಳಿಯಿರುವ ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು ಹೊಡೆತವನ್ನು ಕೂಡ ಆತನ ತಲೆ ಮೇಲೆಯೇ ಹೊಡೆಯಬೇಕು. ಹೀಗೆ ಹೊಡೆದ ಏಟು ತಲೆಗೆ ತಾಗಿ ರಕ್ತ ಚಿಮ್ಮಿದರೆ ಆತ ಸೋತ ಎಂದರ್ಥ.
ಆದರೆ ಇಬ್ಬರೂ ದೃಢಕಾಯರಾಗಿರುವುದರಿಂದ ಪ್ರತಿ ಪ್ರಹಾರವನ್ನು ತಪ್ಪಿಸಿಕೊಂಡು ಕಾಳಗ ನಡೆಸುತ್ತಾರೆ. ಇದು ನೋಡಲು ರೋಚಕವಾಗಿರುತ್ತದೆ. ಜಟ್ಟಿಗಳ ತಲೆ ಮೇಲೆ ರಕ್ತ ಹೊರ ಬರುವವರೆಗೂ ಕಾಳಗ ನಡೆಯುತ್ತದೆ. ರಕ್ತ ಬಂದ ಬಳಿಕ ವಜ್ರಮುಷ್ಠಿ ಕಾಳಗ ಮುಕ್ತಾಯವಾಗುತ್ತದೆ.