ಮೈಸೂರು: ಕೇರಳ ಮತ್ತು ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಪರಿಣಾಮ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡುತ್ತಿರುವ ಕಾರಣ ನಂಜನಗೂಡು ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಂಜನಗೂಡು ತಾಲೂಕು ವರುಣ ಕ್ಷೇತ್ರದ ಹೆಜ್ಜಿಗೆ ಹೊರಮಾವು ಹಳೆ ಬೊಕ್ಕಹಳ್ಳಿ ಸೇರಿದಂತೆ ಕಪಿಲ ನದಿ ದಡದಲ್ಲಿರುವ ಗ್ರಾಮಗಳು ಮುಳುಗುವ ಹಂತಕ್ಕೆ ತಲುಪಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಂತೆ ಬೊಕ್ಕಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸೋಮಸುಂದರ ಶಿವಣ್ಣ ಅಜ್ಜಿಗೆ ಗ್ರಾಮದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣರವರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕಪಿಲಾ ನದಿಯು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರಸಿದ್ದ ಗದ್ದೆಗಳೆಲ್ಲ ಜಲಾವೃತಗೊಂಡಿವೆ ಹಾಗೂ ನದಿಯ ಪಕ್ಕದಲ್ಲಿರುವ ಗ್ರಾಮಗಳಾದ ಬೊಕ್ಕಹಳ್ಳಿ ಹೆಜ್ಜೆಗೆ ಮಲ್ಲಮೂಲೆ ಮಠ ಸೇರಿದಂತೆ ಇನ್ನೂ ಅನೇಕ ಗ್ರಾಮಗಳು ಮುಳುಗುವ ಭಯದಲ್ಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಲದೆ ನೀರು ಹೆಚ್ಚಾದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗೃತಾ ಕ್ರಮವಾಗಿ ಗ್ರಾಮಗಳಿಗೆ ಭೇಟಿ ನೀಡಿಲ್ಲ, ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.
ನದಿಯಲ್ಲಿ ನಾಲ್ಕರಿಂದ ಐದು ಅಡಿಯಷ್ಟು ನೀರು ಹೆಚ್ಚಾದರೆ ಗ್ರಾಮದ ಮನದಲ್ಲಿ ಮನೆಯಲ್ಲಿ ವಾಸಮಾಡುವ ಜನರು ಬೀದಿಗೆ ಬರಬೇಕಾಗುತ್ತದೆ. ಈಗಾಗಲೇ ಹಳೆ ಬೊಕ್ಕಹಳ್ಳಿ ಸಂಪೂರ್ಣ ಮುಳುಗಡೆ ಪ್ರದೇಶವಾಗಿದ್ದು ಗ್ರಾಮವನ್ನು ಸ್ಥಳಾಂತರ ಮಾಡಲು ಕ್ಷೇತ್ರ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿ ಹದಿನಾರು ಗ್ರಾಮದ ಬಳಿಯಿರುವ ಬಿಳಿಕೆರೆ ಮಾದಪ್ಪನ ದೇವಸ್ಥಾನದ ಬಳಿ ನೂರಾರು ಎಕರೆ ಸರ್ಕಾರಿ ಭೂಮಿ ಅಲ್ಲಿ 50 ರಿಂದ 100 ಎಕರೆಯಷ್ಟು ಜಮೀನನ್ನು ನಿವೇಶಮವಾಗಿ ಪರಿವರ್ತಿಸಿ ನಮಗೆ ಕೊಟ್ಟರೆ ನಾವು ಈ ಗ್ರಾಮದಿಂದ ಸಂಪೂರ್ಣವಾಗಿ ಬೇರೆಡೆಗೆ ಹೋಗಿ ಪ್ರತಿ ಬಾರಿಯೂ ಬರುವಂತಹ ಪ್ರವಾಹ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.