ಮೈಸೂರು: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಲಕ್ಷ್ಮಣತೀರ್ಥ ನದಿ ಭೋರ್ಗರೆದು ಹರಿಯುತ್ತಿದ್ದು ಹುಣಸೂರು ತಾಲೂಕಿನ ಹನಗೋಡು ಬಳಿಯಲ್ಲಿ ಕಟ್ಟಲಾಗಿರುವ ಅಣೆಕಟ್ಟೆ ಭರ್ತಿಯಾಗಿ ಕಟ್ಟೆಮೇಲಿಂದ ಧುಮ್ಮಿಕ್ಕಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತಿದೆ.
ಕೊಡಗಿನಲ್ಲಿ ಹುಟ್ಟಿ ನೂರಾರು ಕಿ.ಮೀ, ದೂರವನ್ನು ತೋಟ, ಗದ್ದೆ, ಅರಣ್ಯದ ನಡುವೆ ಹರಿದು ಕಾವೇರಿ ನದಿಯನ್ನು ಸೇರುವ ಲಕ್ಷ್ಮಣ ತೀರ್ಥ ನದಿ ರೈತರ ಜೀವನಾಡಿಯಾಗಿದೆ. ಇಂತಹ ನದಿಗೆ ಹನಗೋಡು ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಲೆಂದು 1961ರಲ್ಲಿ ವಿಶಾಲವಾದ ಅಣೆಕಟ್ಟು ನಿರ್ಮಿಸಿದ್ದು, ಈ ಕಟ್ಟೆ ತುಂಬಿದ ಬಳಿಕ ನೀರು ಹರಿದು ಹೋಗುತ್ತದೆ. ಆದರೆ ಈಗ ಲಕ್ಷ್ಮಣ ತೀರ್ಥ ನದಿ ಭೋರ್ಗರೆದು ಹರಿಯುತ್ತಿರುವುದರಿಂದ ಸುಂದರ ನೋಟ ಲಭ್ಯವಾಗುತ್ತದೆ.
ಕಳೆದ ಕೆಲವು ವರ್ಷಗಳಿಂದ ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದ್ದು, ಪರಿಣಾಮ ಹನಗೋಡು ಕಟ್ಟೆ ಭರ್ತಿಯಾಗಿ ನೀರು ಹರಿದುಹೋಗುತ್ತಿದೆ. ಇದೀಗ ಸುತ್ತಲಿನವರು ನೀರು ಧುಮ್ಮಿಕ್ಕುವ ದೃಶ್ಯವನ್ನು ಸವಿಯಲೆಂದೇ ಇಲ್ಲಿಗೆ ಜನ ಬರುತ್ತಿದ್ದಾರೆ. ಒಟ್ಟಾರೆ ಸುಂದರ ದೃಶ್ಯ ಎಲ್ಲರ ಗಮನಸೆಳೆಯುತ್ತಿದೆ.