ಎಚ್.ಡಿ.ಕೋಟೆ: ಮುಂದಿನ ದಿನಗಳಲ್ಲಿ ಜೈವಿಕ ಕೃಷಿಗೆ ಆದ್ಯತೆ ನೀಡುವ ಮೂಲಕ ರಾಸಾಯನಿಕ ಮುಕ್ತ ಶುಂಠಿ ಬೆಳೆ ಬೆಳೆಯುವ ನಿರ್ಣಯವನ್ನು ಕೇರಳ ಮೂಲದ ರೈತರು ಕೈಗೊಂಡಿದ್ದಾರೆ.
ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿರುವ ಕಪಿಲ ಭವನದಲ್ಲಿ ನಡೆದ ಶುಂಠಿ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕರ್ನಾಟಕ ರಾಜ್ಯದಲ್ಲಿ ರೈತರ ಜಮೀನುಗಳನ್ನು ಗುತ್ತಿ ಪಡೆದು ಶುಂಠಿ ವ್ಯವಸಾಯ ಮಾಡುವ ಕೇರಳ ರೈತರಿಗೆ ಸಾವಯವ ಕೃಷಿ ಬಗ್ಗೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ.ಚಂದನ್ ಗೌಡ ಅವರು ಅರಿವು ಮೂಡಿಸಿದ್ದಾರೆ.
ಹೆತ್ತ ತಾಯಿಯಷ್ಟೇ ಹೊತ್ತ ತಾಯಿಗೂ ಪ್ರಾಮುಖ್ಯತೆ ಕೊಡಬೇಕಿದ್ದು, ಮಣ್ಣಿಗೆ ಯಾವುದೇ ರೀತಿಯ ಕಳೆನಾಶಕ ಮತ್ತು ಕೀಟನಾಶಕ ಸಿಂಪಡಿಸುವುದು ನಿಷೇಧಿಸಬೇಕೆಂದು ಹಾಗೂ ರಾಸಾಯನಿಕಗಳ ಬಳಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕೆಂದ ಅವರು,ರಾಸಾಯನಿಕ ಮುಕ್ತ ಕೃಷಿಗೆ ಸಾಧ್ಯವಾದಷ್ಟು ಆದ್ಯತೆ ನೀಡಿ, ಮಣ್ಷಿನ ಗುಣಮಟ್ಟವನ್ನು ಕಾಪಾಡಿ,ಸಂರಕ್ಷಿಸಬೇಕಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ ಕೇರಳ ರಾಜ್ಯದ ಶುಂಠಿ ಬೆಳೆಗಾರರ ಸಂಘದ ಅಧ್ಯಕ್ಷ ಪಿಲಿಪ್ಸ್ ಜಾರ್ಜ್ ಅವರು ಮಾತನಾಡಿ, ರೈತ ಕಲ್ಯಾಣ ಸಂಘದ ಮಣ್ಣು ಸಂರಕ್ಷಣೆ ಅಭಿಯಾನ ಉತ್ತಮ ಕಾರ್ಯವಾಗಿದ್ದು, ಇದಕ್ಕೆ ಸಂಪೂರ್ಣ ಬೆಂಬಲ ಸೂಚಿಸುವ ಮುಖಾಂತರ ರಾಸಾಯನಿಕ ಮುಕ್ತ ಸಾವಯವ ಕೃಷಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರಲ್ಲದೇ, ಕೇರಳ ಹಾಗೂ ಕರ್ನಾಟಕದಲ್ಲಿ ಶುಂಠಿ ಬೆಳಯುತ್ತಿರುವ ಕೇರಳ ರೈತರಿಗೂ ಜೈವಿಕ ಕೃಷಿ ಮೂಲಕ ಶುಂಠಿ ಸೇರಿದಂತೆ ಇನ್ನಿತರ ಬೆಳೆ ಬೆಳೆಯುವಂತೆ ಸಲಹೆ ಹಾಗೂ ಸೂಚನೆ ನೀಡಿ,ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶುಂಠಿ ಬೆಳೆಗಾರರು ಮುಂದಿನ ದಿನಗಳಲ್ಲಿ ರಾಸಾಯನಿಕ ತ್ಯಜಿಸಿ, ಸಾವಯವಕ್ಕೆ ಮಹತ್ವ ನೀಡುವುದಾಗಿ ಒಮ್ಮತದಿಂದ ನಿರ್ಣಯ ಕೈಗೊಂಡರು. ಈ ವೇಳೆ ಕೇರಳ ಶುಂಠಿ ಬೆಳೆಗಾರರ ಸಂಘದ ಕಾರ್ಯದರ್ಶಿ ರಜಾಕ್, ವೈನಾಡು ಜಿಲ್ಲೆಯ ಕೃಷಿ ಅಧಿಕಾರಿ ವಿಕ್ರಮ್, ರೈತ ಸಂಘದ ಎಲ್ಲಾ ತಾಲೂಕಿನ ಪದಾಧಿಕಾರಿಗಳು, ಮುಖಂಡರುಗಳು ಹಾಗೂ ಕಾರ್ಯಕರ್ತರು ಇದ್ದರು.