ರಾಮನಗರ: ತಾಲ್ಲೂಕಿನ ಬಸವನಪುರ ಸಮೀಪ ಬೆಂಗಳೂರು-ಮೈಸೂರು ಬೈಪಾಸ್ ಹೆದ್ದಾರಿಯ ಮಗ್ಗುಲಲ್ಲಿ ಗುಡ್ಡ ಕುಸಿದು ಹೆಬ್ಬಂಡೆಯೊಂದು ಸರ್ವಿಸ್ ರಸ್ತೆಗೆ ಉರುಳಿಬಿದ್ದಿರುವ ಘಟನೆ ನಡೆದಿದೆ.
ರಾಮನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟ ಅರಣ್ಯ ಪ್ರದೇಶದ ತಪ್ಪಲಿನಲ್ಲಿ ಹಾದುಹೋಗಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಬೈಪಾಸ್ ಹೆದ್ದಾರಿ ನಿರ್ಮಾಣ ಕಾಮಗಾರಿಯ ವೇಳೆ ದೊಡ್ಡ ಗುಡ್ಡವೊಂದರ ಸ್ವಲ್ಪ ಭಾಗವನ್ನು ತೆರವುಗೊಳಿಸಿ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ. ಈ ಸ್ಥಳದಲ್ಲಿ ಕಲ್ಲು ಬಂಡೆಯಿಂದ ಕೂಡಿರುವ ಎತ್ತರದ ಗುಡ್ಡೆಯಿದ್ದು ಇದರ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ದೊಡ್ಡ ಬಂಡೆಯಿರುವ ಅಪಾಯಕಾರಿ ಜಾಗದಲ್ಲಿ ತಡೆಗೋಡೆ ನಿರ್ಮಿಸಿಲ್ಲ.
ಇತ್ತೀಚೆಗೆ ಎಡೆಬಿಡದೆ ಸುರಿದ ಭಾರಿ ಮಳೆಯಿಂದ ನೀರು ಇಂಗಿ ತೇವಾಂಶಗೊಂಡಿದ್ದ ಗುಡ್ಡೆಯಿಂದ ದಿಬ್ಬ ಕುಸಿದಿದ್ದು, ಇದರಲ್ಲಿ ಬೃಹತ್ ಗಾತ್ರದ ಕಲ್ಲು ಬಂಡೆ ಸೇರಿದಂತೆ ದೊಡ್ಡ ಪ್ರಮಾಣದ ಕಲ್ಲುಗಳು ಕಳಚಿ ಸರ್ವಿಸ್ ರಸ್ತೆಗೆ ಬಿದ್ದಿವೆ. ಕಲ್ಲು ಬಂಡೆ ಉರುಳಿಬಿದ್ದ ಸಮಯದಲ್ಲಿ ಅದೃಷ್ಟವಶಾತ್ ಯಾವ ವಾಹನಗಳು ಸಂಚಾರವೂ ಇಲ್ಲದ ಕಾರಣದಿಂದ ಆಗಬಹುದಾದ ಭಾರಿ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ. ಬೆಂಗಳೂರು ಮೈಸೂರು ಬೈಪಾಸ್ ಹೆದ್ದಾರಿ ನಿರ್ಮಾಣದ ವೇಳೆ ಕೆಲವು ಕಡೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ.
ಬೆಂಗಳೂರು ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಹೆಬ್ಬಂಡೆ ಮತ್ತು ಗುಂಡು ಕಲ್ಲುಗಳು ಉರುಳಿ ಬಿದ್ದಿದ್ದು ಅವುಗಳನ್ನು ಹಿಟಾಚಿ ಯಂತ್ರದ ಸಹಾಯದಿಂದ ರಸ್ತೆ ಬದಿಗೆ ಸರಿಸಲಾಗಿದೆ. ಮುಂದಿನ ದಿನಗಳಲ್ಲಿ ಭಾರಿ ಮಳೆ ಸುರಿದರೆ ಸದರಿ ಗುಡ್ಡೆಯಿರುವ ಸ್ಥಳದಲ್ಲಿ ಮತ್ತಷ್ಟು ದಿಬ್ಬ ಕುಸಿಯುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ಸುರಕ್ಷತೆಗೆ ದೊಡ್ಡ ತಡೆಗೋಡೆಯನ್ನು ನಿರ್ಮಿಸುವುದು ಅನಿವಾರ್ಯವಾಗಿದೆ ಎಂಬ ಆಗ್ರಹಗಳು ಸ್ಥಳಿಯರಿಂದ ಕೇಳಿಬಂದಿವೆ.
2022ರ ಅಕ್ಟೋಬರ್ ವೇಳೆಗೆ ಬೆಂಗಳೂರು-ಮೈಸೂರು ಬೈಪಾಸ್ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ತರಾತುರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕೆಲವು ಅವೈಜ್ಞಾನಿಕ ಕ್ರಮಗಳಿಂದ ಹೆದ್ದಾರಿ ಉದ್ದಕ್ಕೂ ನಿರ್ಮಿಸಿರುವ ಸರ್ವಿಸ್ ರಸ್ತೆಯಲ್ಲಿನ ಪ್ರಯಾಣ ಅಸುರಕ್ಷತೆಯಿಂದ ಕೂಡಿದೆ. ಪಾದಚಾರಿಗಳು ಹಾಗೂ ವಾಹನ ಸವಾರರು ಕೆಲವು ಕಡೆ ಜೀವವನ್ನು ಕೈಯಲ್ಲಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.