ಮೈಸೂರು: ಶತಮಾನ ಕಂಡ ಸೇತುವೆಗಳು ರಾಜ್ಯದಲ್ಲಿ ಹಲವಾರು ಇವೆ. ಕೆಲವು ಸೇತುವೆಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಹೊಸ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಇಂತಹ ಸೇತುವೆಗಳ ಪೈಕಿ ಸುಮಾರು 133 ವರ್ಷಗಳ ಸೇತುವೆಯೊಂದು ಮೈಸೂರು ತಾಲೂಕಿನ ಹೆಚ್.ಡಿ.ಕೋಟೆಯಲ್ಲಿದ್ದು ಶಿಥಿಲಗೊಳ್ಳುವ ಹಂತ ತಲುಪಿದೆ.
ಎರಡು ದಶಕಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಮಾಜಿ ಸಚಿವ ಎಂ.ಶಿವಣ್ಣ ಅವರ ಅವಧಿಯಲ್ಲಿ ಹಳೆ ಸೇತುವೆಗೆ ಹೊಂದಿಕೊಂಡಂತೆ ಹೊಸ ಬೃಹತ್ ಸೇತುವೆ ನಿರ್ಮಾಣವಾಯಿತು. ಹೊಸ ಸೇತುವೆ ನಿರ್ಮಾಣದ ಬಳಿಕವೂ ಹಳೆಯ ಸೇತುವೆ ಈಗಲೂ ಪಟ್ಟಣಿಗರು ಸೇರಿದಂತೆ ತಾಲ್ಲೂಕಿನ ಜನತೆಗೆ ಬಳಕೆಯಾಗುತ್ತಿದೆ, ಆದರೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಸೇತುವೆ ನಿರ್ವಹಣೆ ಮತ್ತು ಸಂರಕ್ಷಣೆಗೆ ಮುಂದಾಗದ ಪರಿಣಾಮ ಸೇತುವೆ ಮೇಲೆ ಹಾಕಿದ್ದ ಡಾಂಬರು ಕಿತ್ತು ಬಂದಿದ್ದು, ಗುಂಡಿಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ದುರಸ್ತಿ ಭಾಗ್ಯ ಮಾತ್ರ ಕಾಣುತ್ತಿಲ್ಲ.
ಸೇತುವೆಯ ಮೇಲೆ ಹೊಂಡಗಳಾಗಿರುವುದರಿಂದ ನೀರು ನಿಂತು ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿದೆ. ಸೇತುವೆ ಎರಡು ಬದಿಯಲ್ಲೂ ಗಿಡಗಂಟಿ ಬೆಳೆದಿದ್ದು, ಸೇತುವೆಗೆ ತೊಡಕಾಗಿದೆ. ಶತಮಾನದ ಸೇತುವೆಯ ಉಳಿವಿಗೆ ಪ್ರಾಚ್ಯವಸ್ತು ಇಲಾಖೆಯೂ ಮುಂದಾದಂತೆ ಕಾಣುತ್ತಿಲ್ಲ. ಪಟ್ಟಣದಲ್ಲಿರುವ ಹಳೇ ತಾಲ್ಲೂಕು ಕಚೇರಿ ಹಾಗೂ ಸರ್ಕಾರಿ ಬಾಲಕರ ಮಾದರಿ ಶಾಲೆಯನ್ನು ಮಾತ್ರ ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರಿಸಿರುವ ಪ್ರಾಚ್ಯವಸ್ತು ಇಲಾಖೆ ಶತಮಾನದ ಸೇತುವೆಯತ್ತ ಗಮನಹರಿಸಿದಂತೆ ಕಾಣುತ್ತಿಲ್ಲ.
ಇನ್ನಾದರೂ, ಪ್ರಾಚ್ಯವಸ್ತು ಇಲಾಖೆ ಮತ್ತು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಶತಮಾನದ ಸೇತುವೆಯ ಸಂರಕ್ಷಣೆಗೆ ಮುಂದಾಗಬೇಕಾಗಿದೆ.