ಮೈಸೂರು: ಸಾಲಿಗ್ರಾಮಕ್ಕೆ ನಿಮ್ಮ ಮಗನಾಗಿ ಬಂದಿದ್ದೇನೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ ಎಂದು ತಿಳಿದು ಡಿ. ರವಿಶಂಕರ್ ಅಭ್ಯರ್ಥಿಗೆ ಮತ ನೀಡ ಬೇಕು ಎಂದು ಹೇಳುವುದರ ಮೂಲಕ ಕೆ.ಆರ್.ನಗರಕ್ಕೆ ರವಿಶಂಕರ್ ಕಾಂಗ್ರೆಸ್ ಅಭ್ಯರ್ಥಿ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಾಲಿಗ್ರಾಮ ಪಟ್ಟಣದ ಸರಕಾರಿ ಶಾಲಾ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರಜಾಧ್ವನಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಯಾರೂ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರ ಮತ್ತು ಕ್ಷೇತ್ರದ ಅಭ್ಯರ್ಥಿ ವಿಚಾರದ ಬಗ್ಗೆ ಮಾತನಾಡಬಾರದು ಎಂಬ ಕಾಂಗ್ರೆಸ್ ನಿಯಮವನ್ನು ಮುರಿದಿದ್ದಾರೆ. ಇದುವರೆಗೆ ಕಾಂಗ್ರೆಸ್ ನಿಂದ ಯಾವುದೇ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹೀಗಿರುವಾಗ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿ.ರವಿಶಂಕರ್ ಮತ್ತು ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯ ಮಹದೇವ್ ಅವರ ನಡುವೆ ಡಿ.ರವಿಶಂಕರ್ ಅಭ್ಯರ್ಥಿ ಎಂಬುದನ್ನು ಬಹಿರಂಗವಾಗಿಯೇ ಘೋಷಣೆ ಮಾಡಿದ್ದು, ಐಶ್ವರ್ಯ ಅವರನ್ನು ನಿರಾಸೆಗೀಡು ಮಾಡಿದೆ.
ಹಾಗೆನೋಡಿದರೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕೆ.ಆರ್.ನಗರ ಕ್ಷೇತ್ರದಲ್ಲಿ ಒಕ್ಕಲಿಗರನ್ನು ಸೆಳೆಯುವುದು ಅಷ್ಟೇ ಮುಖ್ಯವಾಗಿದ್ದು, ಮತದಾರರು ಹರಸುವಂತೆ ಬೇಡಿಕೊಳ್ಳುವುದರೊಂದಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ನೋಡುವಂತೆ ಮಾಡಬೇಕು ಎನ್ನುವುದರ ಮೂಲಕ ಪರೋಕ್ಷವಾಗಿ ತನ್ನ ಸಿಎಂ ಆಕಾಂಕ್ಷೆಯನ್ನು ಹೊರ ಹಾಕಿದ್ದಾರೆ. ಭತ್ತದ ಕಣಜ ತಾಲೂಕಿನ ಜನತೆ ಭತ್ತದ ಹಾರ ಹಾಕುವ ಮೂಲಕ ಅತೀವ ಪ್ರೀತಿ, ವಿಶ್ವಾಸ ತೋರಿಸಿದ್ದು ನನ್ನ ರಾಜಕೀಯ ಬದುಕಿಗೆ ಬದಲಾವಣೆ ತರಬೇಕು ಎಂದರೆ ಈ ತಾಲೂಕಿನ ನಮ್ಮ ಪಕ್ಷದ ಅಭ್ಯರ್ಥಿ ಡಿ. ರವಿಶಂಕರ್ ಗೆಲ್ಲುವ ಮೂಲಕ ನನಗೆ ಹಾಗೂ ಪಕ್ಷಕ್ಕೆ ಹೆಚ್ಚು ಶಕ್ತಿ ನೀಡಬೇಕು ಎಂದು ಜನರನ್ನು ಕೋರಿದ್ದಾರೆ.
ಇಂದಿನ ಬಿಜೆಪಿ ಸರಕಾರ ಡಬಲ್ ಇಂಜಿನ್ ಸರ್ಕಾರ ಕೊಟ್ಟರೆ ಎಲ್ಲ ವರ್ಗದ ಅರ್ಥಿಕತೆ ಡಬಲ್ ಮಾಡುತ್ತೀವಿ ಎಂದವರು ಯಾವ ವರ್ಗಕ್ಕೆ ಡಬಲ್ ಮಾಡಿದ್ದಾರೆ ಹೇಳಿ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರು. ಗೊಬ್ಬರ, ಅಡುಗೆ ಎಣ್ಣೆ, ಗ್ಯಾಸ್, ವಿದ್ಯುತ್ ಸೇರಿದಂತೆ ದಿನ ಬಳಕೆಯ ವಸ್ತುಗಳು ತ್ರಿಬ್ಬಲ್ ಆಗಿವೆ. 40 ಪರ್ಸೆಂಟ್ ನಲ್ಲಿ ಸರಕಾರ ಡಬಲ್ ಆಗಿದೆ ಎಂದು ಆರೋಪಿಸಿದರು.
ನಾವು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನವರು ಇಟ್ಟಿರುವ ಕಪ್ಪು ಹಣ ತಂದು ಜನ್ ಧನ್ ಖಾತೆಗೆ ಹಾಕುತ್ತೇವೆ ಎಂದು ಹೇಳಿದವರು ಯಾರ ಖಾತೆಗೆ ಹಣ ಬಂದಿದೆ ಹೇಳಿ ಎಂದರಲ್ಲದೇ? ಇಲ್ಲಿ ಕುಮಾರಸ್ವಾಮಿ ಅಥವಾ ಇಲ್ಲಿನ ಶಾಸಕರ ಮೇಲೆ ಆರೋಪ ಮಾಡಲು ಹೋಗುವುದಿಲ್ಲ ನಮ್ಮ ಪಕ್ಷದ ಜನಪರ ಯೋಜನೆಗಳನ್ನ ಜನರಿಗೆ ತಿಳಿಸಿ ಮತ ಕೇಳಲು ಬಂದಿರುವೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಎಲ್ಲ ವರ್ಗದ ಸಮುದಾಯಕ್ಕೆ ಅಧಿಕಾರ ಸಿಗುತ್ತದೆ. ಈ ನಾಡಿನ ರೈತರ ಬದುಕು ಹಸನಾಗುವುದು. ನಾವು ಪ್ರಣಾಳಿಕೆಯಲ್ಲಿ ಹೇಳಿರುವ ಪ್ರತಿ ಕುಟುಂಬದ ಮಹಿಳೆಯರಿಗೆ 2 ಸಾವಿರ, 200 ಯೂನಿಟ್ ವಿದ್ಯುತ್, 10 ಕೆ.ಜಿ ಅಕ್ಕಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಕೇಳಲು ಬಂದಿರುವೆ ಎಂದು ಹೇಳಿದ್ದಾರೆ.
ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಬೃಹತ್ ಸಮಾವೇಶ ಕಾಂಗ್ರೆಸ್ ನಾಯಕರಲ್ಲಿ ಹುರುಪು ತುಂಬಿದೆ.