ಮೈಸೂರು,ಅ.28: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರ ತಂಡ ಶುಕ್ರವಾರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಇಂದು ಬೆಳಿಗ್ಗೆ ಆಂದೋಲನ್ ವೃತ್ತದ ಬಳಿಯ ಉದ್ಯಾನವನದಲ್ಲಿ ಸಿದ್ದರಾಮಯ್ಯ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕೋಲಾರದ 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು.
ಮುಂದಿನ ಚುನಾವಣೆಯಲ್ಲಿ ನೀವು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಅವರು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಕಾರ್ಯಕರ್ತರು ಪಟ್ಟು ಹಿಡಿದಾಗ, ಸಿದ್ದರಾಮಯ್ಯ ಅವರು ಒಂದು ದಿನ ಅಲ್ಲಿಗೆ ಬಂದು ಮಾತನಾಡುವುದಾಗಿ ಭರವಸೆ ನೀಡಿದರು. ನಂತರ, ಕಾರ್ಯಕರ್ತರು ಮಾಜಿ ಸಿಎಂಗೆ ಮಾಲಾರ್ಪಣೆ ಮಾಡಿದ ನಂತರ ಹಿಂದಿರುಗಿದರು.