ಮೈಸೂರು: ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಸಿದ್ದರಾಮಯ್ಯ ಅವರ ವಿರುದ್ಧ ಕೋಲಾರದಲ್ಲಿ ದಲಿತ ಮುಖಂಡರು ಎಂದು ಹೇಳಿಕೊಳ್ಳುವ ಆರ್.ಎಸ್.ಎಸ್. ಪ್ರೇರಿತರು ಅಭಿಯಾನ ಶುರು ಮಾಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದಲಿತ ನಾಯಕರನ್ನು ಒಳಸಂಚು ಮಾಡಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ ಎಂದು ಸಾರ್ವಜನಿಕವಾಗಿ ಕರಪತ್ರಗಳನ್ನು ಹಂಚಿದ್ದಾರೆ. ದಲಿತ ಮುಖಂಡರು ಎಂದು ಕರೆಸಿಕೊಳ್ಳುವವರು ಸಿದ್ಧರಾಮಯ್ಯ ಅವರನ್ನು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಲು ದಲಿತ ಮತದಾರರನ್ನು ಜಾಗೃತಿ ಮೂಡಿಸುವ ಅಭಿಯಾನ’ ಶುರು ಮಾಡಿದ್ದಾರೆ. ಒಬ್ಬ ಹಿಂದುಳಿದ ವರ್ಗಗಳ ನಾಯಕನನ್ನು ಈ ರೀತಿ ವೈಯಕ್ತಿಕವಾಗಿ ತೇಜೋವದೆ ಮಾಡುವುದು ಒಳ್ಳೆಯದಲ್ಲ. ದಲಿತ ಮುಖಂಡರು ಅನ್ನಿಸಿಕೊಂಡವರು ಬಿಡುಗಡೆ ಮಾಡಿರುವ ಕರ ಪತ್ರದಲ್ಲಿ ವಾಸ್ತವ ಅಂಶಗಳು ಯಾವುದೂ ಇಲ್ಲ. ಇದು ಆರ್ಎಸ್ಎಸ್ ಕುತಂತ್ರ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವಧಿಯಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ. ಅಧಿಕಾರ ವಹಿಸಿಕೊಂಡ ದಿನದಂದೆ ದಲಿತರ ಸಾಲ ಮನ್ನಾ ಮಾಡಿದ್ದಾರೆ. ಎಸ್.ಸಿ.ಪಿ- ಟಿ.ಎಸ್.ಪಿ ಯೋಜನೆ ಜಾರಿಗೆ ತಂದು ಸಾವಿರಾರು ಕೋಟಿ ರುಪಾಯಿ ಮೀಸಲಿಟ್ಟಿದ್ದಾರೆ. ದೇವದಾಸಿಯರಿಗೆ ಸಹಾಯಧನ ನೀಡುವ ಕಾರ್ಯಕ್ರಮ ತಂದಿದ್ದಾರೆ, ದಲಿತ ಸಹಕಾರ ಸಂಘಗಳಿಗೆ ಷೇರು ಬಂದವಾಳ ಶೇ.50 ರಷ್ಟು ಸಹಾಯಧನ ಕಲ್ಪಿಸಿದರು. ದಲಿತ ವಿದ್ಯಾರ್ಥಿಗಳಿಗೆ 2 ಲಕ್ಷದ ವರೆಗೆ ಪ್ರೋತ್ಸಾಹಧನ ನೀಡಿದರು, ಪರಿಶಿಷ್ಟ ಜಾತಿ ಮಕ್ಕಳು ಬೇರೆ ಜಾತಿಯವರನ್ನ ಮದುವೆಯಾದ್ರೆ 3 ರಿಂದ 5 ಲಕ್ಷದ ವರೆಗೆ ಸಹಾಯಧನ ಹೆಚ್ಚಿಸಿದ್ದಾರೆ.
ದಲಿತ ಸಮುದಾಯದ ಗುತ್ತಿಗೆದಾರರಿಗೆ ಮೀಸಲಾತಿ ನೀಡಿದರು. ಸಮುದಾಯ ಭವನಗಳ ನಿರ್ಮಾಣ, ಉನ್ನತ ವ್ಯಾಸಂಗಕ್ಕೆ ಆದ್ಯತೆ ಇನ್ನೂ ನೂರಾರು ಕೊಡುಗೆಗಳನ್ನ ದಲಿತರಿಗಾಗಿ ನೀಡಿದ್ದಾರೆ. ಮುಖ್ಯವಾಗಿ ಅಧಿಕಾರ ಬಡ್ತಿಗೆ ಹೊಸ ಮೀಸಲಾತಿ ಜಾರಿಗೆ ತಂದಾಗ ನೂರಾರು ದಲಿತರು ಹಾಗೂ ಹಿಂದುಳಿದ ವರ್ಗದ ಜನರೂ ಇದರ ಪ್ರಯೋಜನ ಪಡೆದುಕೊಂಡರು. ಮೈತ್ರಿ ಸರ್ಕಾರದ ರಚನೆ ಆದಾಗಲೂ ಜಿ.ಪರಮೇಶ್ವರ್ ಅವರೇ ಉಪಮುಖ್ಯಮಂತ್ರಿ ಆಗಿದ್ದರು. ಇವೆಲ್ಲವೂ ಸಿದ್ದರಾಮಯ್ಯ ಅವರ ದಲಿತಪರ ಕಾಳಜಿಯನ್ನು ತೋರಿಸುತ್ತದೆ. ಬಹುಷ ದಲಿತ ಮುಖ್ಯಮಂತ್ರಿಯಿದ್ದರೂ ದಲಿತರಿಗೆ ಇಷ್ಟೊಂದು ಕಾರ್ಯಕ್ರಮ ನೀಡಲಾಗುತ್ತಿರಲಿಲ್ಲ ಎಂಬುದಾಗಿ ದಲಿತ ಸಚಿವರೆ ಹೇಳಿದ್ದನ್ನು ನಾಡಿನ ಜನ ತಿಳಿದಿದ್ದಾರೆ.
ಆದರೆ ಕೆಲವು ಕಿಡಿಗೇಡಿಗಳು ಇದ್ಯಾವುದನ್ನು ತಿಳಿಯದೇ ಸಿದ್ದರಾಮಯ್ಯ ಅವರ ವಿರುದ್ಧ ವೈಯಕ್ತಿಕ ತೇಜೋವಧೆಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ದಲಿತ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗೋದು ಖಚಿತವಾಗಿದೆ. ದಲಿತ ಸಮುದಾಯದ ಸಿದ್ದರಾಮಯ್ಯ ಅವರ ಪರವಾಗಿದೆ. ಇದನ್ನು ಸಹಿಸದವರು ಎತ್ತಿ ಕಟ್ಟುವ ಕೆಲಸ ಮಾಡ್ತಿದ್ದಾರೆ. ಅವರಿಗೆ ಜನರೇ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದ್ದಾರೆ.