ಮೈಸೂರು: ಮೈಸೂರಿನ ವಿಜಯನಗರ 4ನೇ ಹಂತದಲ್ಲಿರುವ ಸಮರ್ಥನಂ ವಿಶೇಷ ಶಾಲೆಯ ಆವರಣದಲ್ಲಿ ವಿಶೇಷ ಮಕ್ಕಳಿಂದ ಜವಾಹರಲಾಲ್ ನೆಹರು ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಯಿತು.
ಈ ವೇಳೆ ಸಮರ್ಥನಂ ಸಂಸ್ಥೆಯ ಹಿತೈಷಿ ಸೀತಾಲಕ್ಷ್ಮಿ ಮಾತನಾಡಿ, ಮಕ್ಕಳು ನಾಳಿನ ಪ್ರಜೆಗಳು. ಹಾಗಾಗಿ ನಮ್ಮ ಭಾರತ ದೇಶದ ಯಾವುದೇ ಮಕ್ಕಳನ್ನು ವಿದ್ಯಾಭ್ಯಾಸ ದಿಂದ ವಂಚಿತರನ್ನಾಗಿ ಮಾಡಬಾರದು ಎಂದು ನೆಹರೂರವರು ಸದಾ ಹೇಳುತ್ತಿದ್ದರು, ಇಂದು ನಾವು ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿ ಕೊಟ್ಟರೆ ಮುಂದೆ ಮಕ್ಕಳು ನಮ್ಮ ರಾಷ್ಟ್ರಕ್ಕೆ ಭವಿಷ್ಯದ ಭದ್ರ ಬುನಾದಿ ಆಗಲಿದ್ದಾರೆ. ಹಾಗಾಗಿ ಇಂದಿನ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಇಡೀ ರಾಷ್ಟ್ರದ ಭವಿಷ್ಯ ನಿಂತಿದೆ ಎಂದು ನೆಹರುರವರು ತಮ್ಮ ಭಾಷಣಗಳಲ್ಲಿ ಆಗಾಗ ಹೇಳುತ್ತಿದ್ದರು ಎಂದು ತಿಳಿಸಿದರು.
ಸಮರ್ಥನಂ ಸಂಸ್ಥೆಯ ಶಿವರಾಜು ಮಾತನಾಡಿ, ಜವಾಹರಲಾಲ್ ನೆಹರು ಅವರು ತಮ್ಮ ಜೀವನದುದ್ದಕ್ಕೂ ಮಕ್ಕಳನ್ನು ಅವರ ಜಾತಿ, ಮತ, ಧರ್ಮ, ಸಂಸ್ಕೃತಿ ಅಥವಾ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಮೆಚ್ಚಿದರು ಮತ್ತು ಪ್ರೀತಿಸುತ್ತಿದ್ದರು. ಮಕ್ಕಳು ರಾಷ್ಟ್ರದ ಭವಿಷ್ಯವಾಗಿರುವುದರಿಂದ ಪಂಡಿತ್ ಜವಾಹರಲಾಲ್ ನೆಹರು ಅವರು ರಾಷ್ಟ್ರದ ಭವಿಷ್ಯದ ವಾಹಕರಾಗಿರುವುದರಿಂದ ಮಕ್ಕಳಿಗೆ ಪ್ರೀತಿ ಮತ್ತು ಗಮನವನ್ನು ನೀಡಬೇಕು ಎಂದು ನಂಬಿದ್ದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಭ್ರಮಾರಂಬ, ಮುಖಂಡ ನರಸಿಂಹಮೂರ್ತಿ, ವಿಶೇಷ ಶಿಕ್ಷಕಿರಾದ ಪಿ. ಪದ್ಮ, ಹೆಚ್.ವಿದ್ಯಾವತಿ ಸಿಬ್ಬಂದಿ ರಾಘವೇಂದ್ರ, ಪವಿತ್ರ ಮೊದಲಾದವರು ಇದ್ದರು.