ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡೆಮ್ಮೆ ಬೇಟೆಯಾಡಿದ ಆರೋಪದ ಮೇಲೆ ಇಬ್ಬರು ಕಳ್ಳ ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಪ್ರಕಾರ, ಒಟ್ಟು ಒಂಬತ್ತು ಜನರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಮತ್ತು ಅಪರಾಧದ ನಂತರ ಏಳು ಮಂದಿ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಅರಣ್ಯಾಧಿಕಾರಿಗಳು ವಿಶೇಷ ತಂಡ ರಚಿಸಿದ್ದಾರೆ.
ಬಂಧಿತರನ್ನು ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮೀಪುರಂ ನಿವಾಸಿಗಳಾದ ಅಶೋಕ ಮತ್ತು ಕಾತಿಚಂದ್ರ ಎಂದು ಗುರುತಿಸಲಾಗಿದೆ. ಉಳಿದ ಏಳು ಆರೋಪಿಗಳನ್ನು ಮನು, ಬೊಮ್ಮ ಭರತ್, ಆನಂದ್, ಶೇಷಮ್ಮ, ಜಯ, ರಾಮಕೃಷ್ಣಗೌಡ ಮತ್ತು ಮಂಜು ಎಂದು ಗುರುತಿಸಲಾಗಿದೆ.
ಅರಣ್ಯಾಧಿಕಾರಿಗಳ ಪ್ರಕಾರ, ಆರೋಪಿಗಳು ಅಕ್ಟೋಬರ್ 25 ರಂದು ರಾತ್ರಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಲಯದ ಆನೆಚೌಕೂರು ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಡೆಮ್ಮೆ ಬೇಟೆಯಾಡಿದ್ದರು. ಅಪರಾಧದ ನಂತರ, ಆರೋಪಿಗಳು ಪ್ರಾಣಿಯ ಮಾಂಸವನ್ನು ತೆಗೆದುಕೊಂಡು ಹೋಗಿದ್ದಾರೆ. ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಆರೋಪಿಗಳ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಸಿಎಫ್ ಹಾಗೂ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ನರಗುಂದ ನೇತೃತ್ವದ ತಂಡ ಆನೆಚೌಕೂರು ವಲಯದ ಲಕ್ಷ್ಮೀಪುರ ಗ್ರಾಮದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದ ಏಳು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಹರ್ಷಕುಮಾರ ನರಗುಂದ ಮಾಹಿತಿ ನೀಡಿದರು.
ವಲಯ ಅರಣ್ಯಾಧಿಕಾರಿಗಳಾದ ಗಣರಾಜ ಪಟಗಾರ, ಹುಣಸೂರು ವನ್ಯಜೀವಿ ವಲಯದ ರತನಕುಮಾರ, ಡಿಆರ್ಎಫ್ಒಗಳಾದ ಪ್ರಸನ್ನಕುಮಾರ್, ಎನ್.ಕೆ.ವೀರಭದ್ರ, ರಾಮು, ಮನೋಹರ್, ಅರಣ್ಯ ಸಿಬ್ಬಂದಿಗಳಾದ ಲಾಲ್ ಮೊಹಮ್ಮದ್, ಕೃಷ್ಣ ಸುವಾಲ್, ಮತ್ತಿತರರು ತನಿಖೆಯಲ್ಲಿ ಭಾಗವಹಿಸಿದ್ದರು.