ಮೈಸೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಮೈಸೂರು ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಮತ್ತು ರಸ್ತೆಗಳನ್ನು ಯೋಜನಾ ಪೂರಿತವಾಗಿ ಗುಣಮಟ್ಟದ ಕಾಮಗಾರಿಯಿಂದ ಅಭಿವೃದ್ಧಿ ಪಡಿಸಬೇಕೆಂದು ಎಂ.ಜಿ.ರಸ್ತೆಯಲ್ಲಿರುವ ತರಕಾರಿ ಮಾರ್ಕೆಟ್ ಮುಂಭಾಗ ರಸ್ತೆಗುಂಡಿಗಳ ಬಳಿ ವಾಹನ ಸವಾರರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ರವಿಶಂಕರ್ ಮಾತನಾಡಿ, ಮೈಸೂರಿನಲ್ಲಿ ಎಲ್ಲೆಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದೆ. ಆ ಸ್ಥಳದಲ್ಲಿ ವಾಹನ ಸವಾರರಿಂದ ಸಹಿ ಸಂಗ್ರಹಿಸಲಾಗುವುದು ವಾಹನ ಸವಾರರಿಂದ ಪಡೆದ ಸಹಿಗಳನ್ನು ಮೈಸೂರು ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾಪೌರರಿಗೆ ಮನವಿ ಮೂಲಕ ನೀಡಲಾಗುವುದು ಎಂದು ಹೇಳಿದರು.
ದಸರೆ ಮುಗಿದರೂ ಮೈಸೂರಿನ ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಮೈಸೂರು ಮಹಾನಗರ ಪಾಲಿಕೆ ಬಗ್ಗೆ ನಾಚಿಕೆ ಯಾಗುತ್ತದೆ. ಪದೇ ಪದೇ ಕೇಳಲು ಮೇಯರ್ ಅವರು ಪ್ರಾರಂಭದ ಜೋಶ್ನಲ್ಲಿ ದಸರೆಯೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಸಮಾರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಘೋಷಣೆ ಏನೋ ಮಾಡಿದರು. ಆದರೆ ಮೈಸೂರಿನ ಎಲ್ಲಾ ರಸ್ತೆ ಗಳ ಗುಂಡಿಗಳನ್ನು ಮುಚ್ಚದೆ ಪಾಲಿಕೆ ಅಧಿಕಾರಿಗಳು ಕಣ್ಣೊರೆಸುವ ತಂತ್ರ ಮಾಡಿದರು.
ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಮಹಾನಗರ ಪಾಲಿಕೆ ಮಲಗಿದೆಯೇ, ಪಾಲಿಕೆ ಸದಸ್ಯರಿಗೆ ಅವರ ಕ್ಷೇತ್ರದ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಆಗುತ್ತಿಲ್ಲವೇ? ನಿಮ್ಮಿಂದ ರಸ್ತೆ ಗುಂಡಿ ಗಳನ್ನು ಮುಚ್ಚಿಸಲು ಸಾಧ್ಯವಾಗುತ್ತಿಲ್ಲವೆಂದಾದರೆ ಮುಂದಿನ ಚುನಾವಣೆಗೆ ಯಾವ ಮುಖ ಇಟ್ಟುಕೊಂಡು ಓಟು ಕೇಳುತ್ತೀರಿ? ಇನ್ನೂ ವಲಯ ಇಂಜಿನಿಯರ್ಗಳ ಕಣ್ಣಿಗೆ ಈ ಗುಂಡಿಗಳು ಕಾಣುತ್ತಿಲ್ಲವೆ, ಕಂಡರೂ ಇದು ನಿಮಗೆ ಲಾಭದಾಯಕವಲ್ಲ ವೆಂಬ ಧೋರಣೆಯೇ ಅಥವಾ ರಸ್ತೆ ಗುಂಡಿ ಮುಚ್ಚಲಾರದಷ್ಟು ಪಾಲಿಕೆ ದಿವಾಳಿ ಯಾಗಿದೆಯೇ? ಮಹಾಪೌರರು ಮತ್ತು ಆಯುಕ್ತರೇ ಇದಕ್ಕೆ ಉತ್ತರಿಸಬೇಕು. ಜನರು ಜೀವ ಕಳೆದುಕೊಳ್ಳುವ ಮುನ್ನ ರಸ್ತೆ ಗುಂಡಿಗಳನ್ನು ಮುಚ್ಚಿ ಮೈಸೂರು ಮಹಾನಗರ ಪಾಲಿಕೆ ಮಾನ ಕಾಪಾಡಿ ಎಂಬುದೇ ಕಳಕಳಿಯ ಮನವಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಚಕ್ರಪಾಣಿ ಹಾಗೂ ಆಟೋ ಚಾಲಕರು ಮತ್ತು ರಸ್ತೆ ಬದಿ ವ್ಯಾಪಾರಿಗಳು ಇದ್ದರು.