ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳ್ಳುವವರೆಗೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯನ್ನು ಬೆಂಬಲಿಸಿ ಡಿವೈಎಫ್ಐ, ಎಸ್ಎಫ್ಐ ಇಂದು ಉರ್ವಸ್ಟೋರ್ ಜಂಕ್ಷನ್ ನಿಂದ ಸುರತ್ಕಲ್ ಟೋಲ್ ಗೇಟ್ ವರೆಗೆ ಸಂಘಟಿಸಿದ ಬೈಕ್ ರ್ಯಾಲಿಯ ಅನುಮತಿಯನ್ನು ನಿರಾಕರಿಸಿದ ಪೊಲೀಸರು ಬೈಕ್ ರ್ಯಾಲಿಯನ್ನು ತಡೆದರು.
ಈ ವೇಳೆ ಡಿವೈಎಫ್ಐ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಪಾದಯಾತ್ರೆಯ ಮೂಲಕವೇ ಸುರತ್ಕಲ್ ತೆರಳಲು ಮುಂದಾದ ಹೋರಾಟಗಾರರನ್ನು ಉರ್ವ ಠಾಣಾ ಪೊಲೀಸರು ತಡೆದು ಬಂಧಿಸಿದರು.
ಡಿವೈಎಫ್ಐನ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನವೀನ್ ಕೊಂಚಾಡಿ ಸಹಿತ ಸುಮಾರು 25ಕ್ಕೂ ಅಧಿಕ ಕಾರ್ಯಕರ್ತರನ್ನು ಉರ್ವ ಪೊಲೀಸರು ಬಂಧಿಸಿ 50ಕ್ಕೂ ಅಧಿಕ ಬೈಕ್ ಗಳನ್ನು ವಶಕ್ಕೆ ಪಡೆದರು. ನಂತರ ಡಿವೈಎಫ್ಐ ಕಾರ್ಯಕರ್ತರನ್ನು ಸ್ಟೇಷನ್ ಜಾಮೀನಿನಡಿ ಬಿಡುಗಡೆಗೊಳಿಸಿದರು.