ಮೈಸೂರು: ಆಕಾಶವಾಣಿಯು ಕೇಳುಗರ ಗೆಳೆಯನಂತೆ ಕಾರ್ಯನಿರ್ವಹಿಸುತ್ತದೆ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಬಣ್ಣಿಸಿದರು.
ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಸಮುದ್ಯತಾ ಶ್ರೋತೃ ಸಂಘದ 12 ನೇ ವಾರ್ಷಿಕೋತ್ಸವ ಹಾಗೂ ಎಫ್. ಎಮ್ 100.6, ಮೈಸೂರು ಆಕಾಶವಾಣಿ ಕೇಳುಗರ ಬಳಗದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿ, ದೂರದರ್ಶನದ ಎಂದರೆ ಅದನ್ನು ನೋಡುತ್ತಲೇ ಇರಬೇಕು. ಬರಿ ಕೇಳುವುದರಿಂದ ಅದರ ವ್ಯವದಾನವನ್ನು ಅರಿಯುವುದರಲ್ಲಿ ವಿಫಲರಾಗುತ್ತೇವೆ. ಆದರೆ ರೇಡಿಯೋವನ್ನು ಕೇಳುತ್ತಲೇ ನಮ್ಮ ಕೆಲಸದಲ್ಲಿ ತೊಡಗಬಹುದುದು ಎಂದರು.
ಆಕಾಶವಾಣಿ ವಿಶೇಷವಾಗಿ ಸಾಹಿತ್ಯ, ಸಂಸ್ಕೃತಿ ಪ್ರಚಲಿತ ವಿದ್ಯಮಾನಗಳು, ಸಂವಾದ ಚರ್ಚೆ- ಈ ಎಲ್ಲವನ್ನು ಕಟ್ಟಿಕೊಡುವ ದೊಡ್ಡ ಕ್ರಿಯಾಶೀಲ ಶಕ್ತಿಯಾಗಿ ಹೊರಹೊಮ್ಮಿದೆ. ಪ್ರತಿಯೊಂದು ಅಭಿವೃದ್ಧಿ ಪರ ನುಡಿಗಳು ಹಾಗೂ ನಮಗೆಲ್ಲ ಧ್ವನಿ ಕೊಡುವ ಮೂಲಕ ಆಕಾಶವಾಣಿ ತನ್ನ ಘನತೆ, ಗೌರವವನ್ನು ಹೆಚ್ಚಿಸಿಕೊಳ್ಳುವುದರ ನಿಟ್ಟಿನಲ್ಲಿ ಕೇಳುಗರ ಕಿವಿ ನಿಮಿರಿಸಿಕೊಂಡು ಕೇಳುವ ಮಾಧ್ಯಮವಾಗಿದೆ ಎಂದು ಅವರು ಹೇಳಿದರು.
ಇನ್ನು ಸಾಹಿತ್ಯವೂ ಮುಪ್ಪಿನವರ ಮೂಡಿಪಾಗಿದೆ. ಇದರಲ್ಲಿ ಯುವಜನತೆಯನ್ನು ಸೆಳೆಯುವುದು ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಯುವಕರು ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಅವರನ್ನು ಸಾಹಿತ್ಯ, ಸಂಸೃತಿಯಡೆಗೆ ಕರೆತರುವುದು ಕಷ್ಟವಾಗಿದೆ ಎಂದು ಅವರು ವಿಷಾದಿಸಿದರು.
ಈಗಿನ ದಿನ ಮಾನದಲ್ಲಿ ಕಥೆ, ಕವನಗಳನ್ನು ಓದುವುದರಿಂದ ವಿವಿಧ ವಿಷಯಗಳ ಗ್ರಹಿಸಲುಸಾಧ್ಯವಾಗುತ್ತದೆ ಅದರಂತೆ ಜೀವನದಲ್ಲಿ ಬದಲಾವಣೆ ತರುವಂತ ಕೃತಿಗಳು ನಮಗೆ ಪ್ರೇರಣೆಯನ್ನು ನೀಡುತ್ತವೆ ಎಂದರು.
ಮೈನಾ ಲೋಕೇಶ್ ಅವರ ‘ಮತ್ತೆ ಬರುವ ಮಿತ್ರ’ ಕವನ ಸಂಕಲನ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮೊದಲು ಕೇಳುಗ ಕೋರಿಕೆ, ನಿಮ್ಮ `ಮೆಚ್ಚಿನ ಗೀತೆಗಳು’ ಬರುತ್ತಿದ್ದವು ಆದರೆ ಈಗ ಟಿವಿಗಳಲ್ಲಿ `ಮಚ್ಚಿನ ಗೀತೆ’ಗಳನ್ನು ನೋಡುವ ಸಮಯ. ಹೀಗಾಗಿ ದೃಶ್ಯ ಮಾಧ್ಯಮಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಆಕಾಶವಾನಿ ಯಲ್ಲಿ ಬರುವ ಕೃಷಿ ರಂಗ ಕಾರ್ಯಕ್ರಮವು ಇಂದಿಗೂ ಪರಿಣಾಮಕಾರಿಯಾಗಿ ಕೇಳುಗರನ್ನ ಸೆಳೆಯುತ್ತಿದೆ ಎಂದರು.
ಇನ್ನು ಸುದ್ದಿಯ ನಿಖರತೆ ಬಗ್ಗೆ ಮಾತನಾಡುವುದಾದರೆ ಆಕಾಶವಾಣಿಯಲ್ಲಿ ಬಂದರೆ ಅದನ್ನು ನಿಜವಾದ ಸುದ್ದಿ ಎಂದು ನಂಬುತ್ತಾರೆ. ಅಷ್ಟು ಪ್ರಭಾವವನ್ನು ಸಮಾಜದಲ್ಲಿ ಬೀರಿದೆ ಇನ್ನೊಂದು ಮುಖ್ಯವಾದ ವಿಷಯವೆಂದರೆ ಡಾ. ರಾಜಕುಮಾರರವನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ಪಾರ್ವತಮ್ಮ ರಾಜಕುಮಾರ್ ಅವರ ಸಂದೇಶವನ್ನು ಮೊದಲು ಸಂದೇಶವನ್ನು ಪ್ರಸಾರ ಮಾಡುವ ಮೂಲಕ ಕಾಡಿಗೆ ತಲುಪಿಸಿದ್ದು ಆಕಾಶವಾಣಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಆಕಾಶವಾಣಿ ಹಿರಿಯ ಉದ್ಘೋಷಕ ಡಾ.ಮೈಸೂರು ಉಮಶ್ ಮಾತನಾಡಿ, ಹಲವಾರು ಒತ್ತಡಗಳ ನ಼ಡುವೆಯೂ ಆಕಾಶವಾಣಿ ಉಳಿಯಬೇಕಾಗಿದೆ ಎಂದರು.
ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಎಸ್, ಸುಬ್ರಹ್ಮಣ್ಯ, ಪ್ರತಿಭಾವಂತ ವಿದ್ಯಾರ್ಥಿ ಜೆ. ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು. ತಿ.ನರಸೀಪುರ ತಾಲೂಕು ಹನುಮನಾಳು ಶಿಲ್ಪಿ ರಮೇಶ್ ಅವರಿಗೆ ಸದ್ಭವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕವಯತ್ರಿ ಡಾ, ಕೆ ಏನ್. ಲಾವಣ್ಯಪ್ರಭಾ, ಮುಕ್ತ ವಿವಿ ಅರ್ಥಶಾಸ್ತç ವಿಭಾಗದ ಮುಖ್ಯಸ್ಥೆ ಡಾ.ಆರ್.ಎಚ್. ಪವಿತ್ರಾ ಕೃತಿ ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷ ಕಣ್ಣೂರು ವಿ ಗೋವಿಂದಾಚಾರಿ ಮಾತನಾಡಿ, ಮೈಸೂರು ಆಕಾಶವಾಣಿಯು ಕೇಳುಗರಿಗೆ ಪ್ರಶಸ್ತಿ ನೀಡುವುದನ್ನು ಪುನಾರಂಭಿಸಬೇಕು ಎಂದು ಮನವಿ ಮಾಡಿದರು.
ಕವಿ ಮೈನಾ ಲೋಕೇಶ್, ಕಾಳಿಹುಂಡಿ ಶಿವಕುಮಾರ್, ರಾಜಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು.
ಪಾರ್ವತಿ ವಟ್ಟಂ ನಿರೂಪಿಸಿದರು. ಚಂದ್ರಕಲಾ ಕುಮಾರ್ ವಂದಿಸಿದರು. ಮೈಸೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕ ಶ್ರೀನಿವಾಸ್, ನಿವೃತ್ತ ಕಾರ್ಯಕ್ರಮ ನಿರ್ವಾಹಕ ಶಂಕರಪ್ಪ ಸೇರಿದಂತೆ ಸಿಬ್ಬಂದಿ, ಆಕಾಶವಾಣಿಯ ಕೇಳುಗರು ಪಾಲ್ಗೊಂಡಿದ್ದರು.